ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಕೊಡಗು ಜಿಲ್ಲೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದೇಶವೇ ಇಲ್ಲದೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಮತ್ತು ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಕಾವೇರಿ ನದಿಯ ಹೂಳು ತೆಗೆಯುವ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಏನಿದು ಘಟನೆ..?
ಕುಶಾಲನಗರ ಪಟ್ಟಣದ ರಸೂಲ್ ಬಡಾವಣೆ ಭಾಗದಲ್ಲಿ ಕಾವೇರಿ ನದಿಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿತ್ತು. ಈ ಹೂಳು ತುಂಬಿರುವುದರಿಂದ ಕಳೆದ ಎರಡು ವರ್ಷಗಳಿಂದಲೂ ಕಾವೇರಿ ನದಿಯಲ್ಲಿ ಪ್ರವಾಹ ಎದುರಾಗಿ ಕುಶಾಲನಗರ ಪಟ್ಟಣದ ಹಲವು ಬಡಾವಣೆಗಳು ಮುಳುಗಡೆಯಾಗುತ್ತಿದ್ದವು. ಹೀಗಾಗಿ ಈ ಹೂಳು ತೆರವುಗೊಳಿಸಿದರೆ ಪ್ರವಾಹ ಪರಿಸ್ಥಿತಿ ತಪ್ಪುತ್ತದೆ ಎಂದು ಕುಶಾಲನಗರದ ಕಾವೇರಿ ನದಿ ಸಂರಕ್ಷಣಾ ವೇದಿಕೆ ಮುಖಂಡರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಬಳಿಕ ಹಾರಂಗಿ ಹೂಳು ತೆಗೆಯಲು ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 130 ಕೋಟಿ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಈ ಅನುದಾನ ಬಿಡುಗಡೆಯಾದ 89 ಕೋಟಿಯನ್ನು ಬಳಸಿ ಕಾವೇರಿಯ ಹೂಳು ತೆಗೆಯಲು ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಮೂರು ದಿನಗಳ ಹಿಂದೆಯಷ್ಟೇ ಕಾಮಗಾರಿಗೆ ಚಾಲನೆ ನೀಡಿದ್ದರು.

ಆದರೆ ಕಾಮಗಾರಿ ನಡೆಸುವುದಕ್ಕೆ ಯಾವುದೇ ಟೆಂಡರ್ ಅಥವಾ ಅಧಿಕೃತ ಆದೇಶವೇ ಆಗಿಲ್ಲ. ಆದರೂ ಅನಧಿಕೃತವಾಗಿ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಕುಶಾಲನಗರ ನಿವಾಸಿ ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್ ಅಶೋಕ್ ಎಂಬವರು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಕಾವೇರಿ ನದಿಯಲ್ಲಿ ಯಾವುದೇ ಭಾರೀ ಯಂತ್ರಗಳನ್ನು ಬಳುಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶವಿದ್ದರೂ ಹಿಟಾಚಿ ಟಿಪ್ಪರ್ ವಗಳನ್ನು ಬಳಸಿ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಪಕ್ಕದಲ್ಲೇ ಇರುವ ಸೇತುವೆಗೂ ತೊಂದರೆ ಆಗಲಿದೆ ಎಂದು ಅರೋಪಿಸಿ ದೂರು ನೀಡಿದ್ದಾರೆ.

ಮತ್ತೊಂದೆಡೆ ಬಸವಣ್ಣ ದೇವರ ಬನ ಟ್ರಸ್ಟ್ ಹೆಸರಿನಲ್ಲಿ ಪರಿಸರವಾದಿಗಳು ಕೂಡ ಶಾಸಕ ಅಪ್ಪಚ್ಚು ರಂಜನ್, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಪುರುಷೋತ್ತಮ ರೈ, ಕಾವೇರಿ ನದಿ ಸಂರಕ್ಷಣಾ ವೇದಿಕೆ ಮುಖಂಡ ಚಂದ್ರಮೋಹನ್, ಎಂ.ಎಂ ಚರಣ್ ಸೇರಿದಂತೆ ಐವರ ವಿರುದ್ಧ ಅರಣ್ಯ ಇಲಾಖೆಗೂ ದೂರು ನೀಡಲಾಗಿದೆ.

Comments

Leave a Reply

Your email address will not be published. Required fields are marked *