ಶಾಸಕರ ಮಳೆ ಹಾನಿ ವೀಕ್ಷಣೆ ವೇಳೆಯೇ ಸೇತುವೆ ಕುಸಿತ- ಗ್ರಾಮಸ್ಥರಿಬ್ಬರಿಗೆ ತೀವ್ರ ಗಾಯ

ರಾಯಚೂರು: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಾನಿಯಾದ ಹಳ್ಳದ ಸೇತುವೆಯನ್ನು ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ವೀಕ್ಷಿಸುತ್ತಿದ್ದರು. ಇದೇ ವೇಳೆ ಪುನಃ ಸೇತುವೆ ಕುಸಿದಿದ್ದು, ಗ್ರಾಮಸ್ಥರಿಬ್ಬರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಸಿರವಾರ ತಾಲೂಕಿನ ನುಗಡೋಣಿ ಹೊಸೂರಿನಲ್ಲಿ ಘಟನೆ ನಡೆದಿದ್ದು, ಹನುಮಂತ ಹಾಗೂ ಶಿವರಾಮರೆಡ್ಡಿ ಗಾಯಗೊಂಡ ಗ್ರಾಮಸ್ಥರು. ಸೆಪ್ಟೆಂಬರ್ 26 ರಂದು ಸುರಿದ ಭಾರೀ ಮಳೆಗೆ ಸೇತುವೆ ಅರ್ಧ ಕುಸಿದು ವಾಹನ ಸಂಚಾರ ಬಂದ್ ಆಗಿತ್ತು. ಸಿರವಾರದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಮಾರ್ಗ ಬಂದ್ ಆಗಿರುವುದರಿಂದ ಜನ ಪರದಾಡುತ್ತಿದ್ದಾರೆ. ಹೀಗಾಗಿ ಮಾನ್ವಿ ಶಾಸಕ ವೆಂಕಟಪ್ಪ ನಾಯಕ್ ಮಳೆ ಹಾನಿ ಹಾಗೂ ಸೇತುವೆ ವೀಕ್ಷಣೆಗೆ ಬಂದಿದ್ದರು. ಶಾಸಕರು ಬಂದಿದ್ದರಿಂದ ಹೆಚ್ಚು ಜನ ಸೇರಿದ್ದರು ಹೀಗಾಗಿ ಶಿಥಿಲಗೊಂಡ ಸೇತುವೆ ಭಾರ ತಾಳದೆ ಇನ್ನಷ್ಟು ಕುಸಿದು ಬಿದ್ದಿದೆ.

ಈ ವೇಳೆ ಗ್ರಾಮಸ್ಥರಿಬ್ಬರು ಕುಸಿದ ಸೇತುವೆ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ವತಃ ತಮ್ಮ ಕಾರಿನಲ್ಲೆ ಆಸ್ಪತ್ರೆಗೆ ದಾಖಲಿಸುವ ಮೂಲಕ ಶಾಸಕ ವೆಂಕಟಪ್ಪ ನಾಯಕ್ ಮಾನವೀಯತೆ ಮೆರೆದಿದ್ದಾರೆ. ಮಾನ್ವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹನುಮಂತ ಹಾಗೂ ಶಿವರಾಮರೆಡ್ಡಿ ಚೇತರಿಸಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *