ಶಾಸಕರ ಗುರುತಿನ ಚೀಟಿಯಿದ್ದ ಕಾರ್ ಗ್ಲಾಸ್ ಪುಡಿ – 4 ಲಕ್ಷ ರೂ. ಕಳ್ಳತನ

ರಾಯಚೂರು: ಶಾಸಕರ ಗುರುತಿನ ಚೀಟಿ ಅಂಟಿಸಿದ್ದ ಕಾರಿನ ಗ್ಲಾಸ್ ಒಡೆದು ಖದೀಮರು ಹಣ ಕಳ್ಳತನ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸೂಗುರು ಗುರುತಿನ ಚೀಟಿ ಇದ್ದ ಕಾರಿನ ಗ್ಲಾಸ್ ಒಡೆದು 4 ಲಕ್ಷ ರೂ. ಹಣವನ್ನು ಖದೀಮರು ದೋಚಿದ್ದಾರೆ. ಆದರೆ ಈ ಕಾರು ಶಾಸಕರ ಬೆಂಬಲಿಗ ಡಾಂಬರ್ ಗೋವಿಂದ್ ಎಂಬವರಿಗೆ ಸೇರಿದ್ದಾಗಿದ್ದು, ಶಾಸಕರ ಗುರುತಿನ ಚೀಟಿಯನ್ನು ಅಂಟಿಸಿಕೊಂಡು ಓಡಾಡುತ್ತಿದ್ದನು.

ಎರಡು ವರ್ಷದ ಕೆಳಗೆ ಬೆಂಬಲಿಗನಿಗೆ ಶಾಸಕ ಬಸವರಾಜ್ ದಡೆಸೂಗುರು ಕಾರು ಮಾರಿದ್ದರು. ಬೆಂಬಲಿಗ ಶಾಸಕರ ಗುರುತಿನ ಚೀಟಿಯನ್ನು ತೆಗೆಯದೇ ಹಾಗೆಯೇ ಬಳಸಿಕೊಂಡಿದ್ದಾನೆ. ಸದ್ಯ ಈ ಘಟನೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇದೀಗ ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *