ನವದೆಹಲಿ: ಲಾಕ್ಡೌನ್ ಬಳಿಕ ಶಾಲೆ ಕಾಲೇಜುಗಳು ಪುನಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳಾಗುತ್ತಿದೆ. ಇಂದಿನಿಂದ ಹರಿಯಾಣ, ಅಸ್ಸಾಂ ಮತ್ತು ಜಮ್ಮು ಕಾಶ್ಮೀರದಲ್ಲಿ ಶಾಲಾ-ಕಾಲೇಜುಗಳು ಪ್ರಾಯೋಗಿಕವಾಗಿ ಪುನಾರಂಭಕ್ಕೆ ರಾಜ್ಯ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿವೆ.

ಖಾಸಗಿ ಶಾಲೆಗಳ ಒತ್ತಡ ಹಿನ್ನೆಲೆ ಮತ್ತಷ್ಟು ರಾಜ್ಯಗಳಲ್ಲಿ ಶಾಲೆ ಕಾಲೇಜುಗಳನ್ನು ಪುನಾರಂಭಿಸುವ ನಿಟ್ಟಿನಲ್ಲಿ ತಯಾರಿಗಳು ನಡೆದಿದೆ. ಬಿಹಾರದಲ್ಲಿ ಸೆಪ್ಟೆಂಬರ್ 28 ರಿಂದ ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶಗಳಲ್ಲಿ 9 ರಿಂದ 12ನೇ ತರಗತಿ ಮಕ್ಕಳು ಶಾಲೆಗೆ ತೆರಳಿ ಶಿಕ್ಷಕರಿಂದ ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳಬಹುದು ಎಂದು ಸೂಚಿಸಲಾಗಿದೆ.

ತ್ರಿಪುರದಲ್ಲಿ ಅಕ್ಟೋಬರ್ 5 ರಿಂದ 9-12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರನ್ನು ಸಂಪರ್ಕಿಸಬಹುದು ಎಂದು ಶಿಕ್ಷಣ ಸಚಿವ ರತನ್ ಲಾಲ್ ನಾಥ್ ಹೇಳಿದ್ದಾರೆ. ಆದರೆ ಶಾಲೆಗೆ ಬರುವ ಮುನ್ನ ಪೊಷಕರ ಅನುಮತಿ ಕಡ್ಡಾಯ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 1 ರಿಂದ ತಮಿಳುನಾಡಿನಲ್ಲಿ 10,11,12 ನೇ ತರಗತಿ ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳಬಹುದಾಗಿದ್ದು ಶಿಕ್ಷಕರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಳ್ಳಬಹುದು, ಶಾಲಾ ಕಾಲೇಕು ತೆರಳುವ ಮುನ್ನ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಹೇಳಿದೆ.

ಉತ್ತರ ಪ್ರದೇಶದಲ್ಲಿ ಖಾಸಗಿ ಶಾಲೆ ಸಂಘ ಡಿಸಿಎಂ ದಿನೇಶ್ ಶರ್ಮಾ ಭೇಟಿ ಮಾಡಿ ಶಾಲೆಗಳ ಪುನಾರಂಭಕ್ಕೆ ಒತ್ತಾಯಿಸಿದ್ದಾರೆ. ಅರ್ಧ ವಾರ್ಷಿಕ ಪರೀಕ್ಷೆ ದೃಷ್ಟಿಯಲ್ಲಿಟ್ಟುಕೊಂಡು ಅಕ್ಟೋಬರ್ 12 ರಿಂದ 9-12ನೇ ತರಗತಿ ಮಕ್ಕಳಿಗೆ ಶಾಲೆ ತೆರಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಯುಪಿ ಸರ್ಕಾರ ತಯಾರಿ ಆರಂಭಿಸಿದ್ದು ಈವರೆಗೂ ದಿನಾಂಕ ಪ್ರಕಟಿಸಿಲ್ಲ.

ದುರ್ಗಾ ಪೂಜೆ ಹಿನ್ನಲೆ ಅಕ್ಟೋಬರ್ ಮಧ್ಯ ಭಾಗದಲ್ಲಿ ಪಶ್ಚಿಮ ಬಂಗಾಳದಲ್ಲಿ ಶಾಲೆಗಳ ಆರಂಭ ಅನುಮಾನ ಎನ್ನಲಾಗಿದ್ದು ನವೆಂಬರ್ ಮಧ್ಯಭಾಗದಲ್ಲಿ ಪುನಾರಂಭವಾಗಬಹುದು ಎಂದು ಹೇಳಲಾಗಿದೆ.
ಇನ್ನು ದೆಹಲಿಯಲ್ಲಿ ಅಕ್ಟೋಬರ್ 5 ರಿಂದ ಶಾಲೆ ಕಾಲೇಜು ಪುನಾರಂಭಿಸಲು ಕೇಜ್ರಿವಾಲ್ ಸರ್ಕಾರ ನಿರ್ಧಾರ ಮಾಡಿದ್ದು ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.


Leave a Reply