ವೇತನವಿಲ್ಲದೆ ಕೆಎಸ್‌ಆರ್‌ಟಿಸಿ ನೌಕರರು ಕಂಗಾಲು

ಬೆಂಗಳೂರು: ಲಾಕ್‍ಡೌನ್ ಎಫೆಕ್ಟ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ ಈ ತಿಂಗಳ ವೇತನವನ್ನು ಇನ್ನೂ ನೌಕರರಿಗೆ ಪಾವತಿಸಿಲ್ಲ.

ಸಾಮಾನ್ಯವಾಗಿ ತಿಂಗಳ 2ನೇ ದಿನಾಂಕದಂದೇ ಸಂಬಳ ನೌಕರರ ಬ್ಯಾಂಕ್ ಖಾತೆಗೆ ಬಂದು ಬೀಳುತ್ತಿತ್ತು. ಆದರೆ ಆರನೇ ತಾರೀಖು ಮುಗಿದರೂ ಸಾರಿಗೆ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. ನಾಳೆ ಭಾನುವಾರ ಬೇರೆ, ಸೋಮವಾರ ಕೂಡ ಆಗುತ್ತೋ ಇಲ್ವೋ ಅನ್ನೋ ಗ್ಯಾರಂಟಿ ಇಲ್ಲ. ಯಾಕಂದ್ರೆ ಈ ತಿಂಗಳ ಅರ್ಧ ಸಂಬಳ ನೀಡಿ ನೆರವಾಗುವಂತೆ ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಸಿಎಂ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ವೇತನ ಇಲ್ದೇ ಸಾರಿಗೆ ಸಿಬ್ಬಂದಿ ಪರದಾಡುತ್ತಿದ್ದಾರೆ.

ಬಸ್‍ಗಳಲ್ಲಿ ಸಾಮಾಜಿಕ ಅಂತರ ಪಾಲಿಸಿದರೆ ಮೊದಲಿನಂತೆ ಆದಾಯ ಗಳಿಸುವುದು ಕಷ್ಟ. ಹೀಗಾಗಿ ಸಾಮಾಜಿಕ ಅಂತರ ನಿಯಮ ಕೈ ಬಿಡುವಂತೆ ಕೋರಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸಂಸ್ಥೆಗೆ 531 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೆಎಸ್‌ಆರ್‌ಟಿಸಿ ಮೇ 11ರಂದು ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸದ್ಯ ಬಸ್‍ಗಳು ಓಡಾಡುತ್ತಿದ್ದರೂ ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸಂಸ್ಥೆ ನಷ್ಟವನ್ನು ಎದುರಿಸುತ್ತಿದೆ.

Comments

Leave a Reply

Your email address will not be published. Required fields are marked *