ವೃದ್ಧ ಹೆತ್ತವರನ್ನ ಕತ್ತುಹಿಸುಕಿ ಕೊಂದು, ಬೆಂಕಿ ಹಚ್ಚಿ ಆಕಸ್ಮಿಕವೆಂದು ಕಥೆ ಕಟ್ಟಿದ ಪುತ್ರರು!

ಲಕ್ನೋ: ವೃದ್ಧ ದಂಪತಿಯ ನಿಗೂಢ ಸಾವಿನ ತನಿಖೆಯ ವೇಳೆ ಪೊಲೀಸರೇ ಬೆಚ್ಚಿ ಬೀಳುವಂತೆ ಸ್ಟೋರಿಯೊಂದು ಬೆಳಕಿಗೆ ಬಂದಿದೆ.

ಹೌದು. ಉತ್ತರಪ್ರದೇಶದ ಬರೇಲಿಯಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಈ ಸಾವಿನ ಜಾಡು ಹಿಡಿದ ಪೊಲೀಸರಿಗೆ ದಂಪತಿಯ ಇಬ್ಬರು ಪುತ್ರರೇ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಮೃತ ದುರ್ದೈವಿ ವೃದ್ಧ ದಂಪತಿಯನ್ನು ರಾಜೇಂದ್ರ(61) ಹಾಗೂ ರಾಜ್ವತಿ(57) ಎಂದು ಗುರುತಿಸಲಾಗಿದೆ. ದಂಪತಿ ಬುಡಾನ್ ನಲ್ಲಿರುವ ತಮ್ಮ ನಿವಾಸದಲ್ಲಿ ವಾಸವಿದ್ದರು. ಆದರೆ ಡಿಸೆಂಬರ್ 15ರಂದು ಸಾವನ್ನಪ್ಪಿದ್ದರು. ಈ ದಂಪತಿಗೆ ನಾಲ್ವರು ಪುತ್ರರಿದ್ದು, ನಾಲ್ಕು ಮಂದಿ ಕೂಡ ಹೆತ್ತವರಿಂದ ದೂರವಾಗಿದ್ದಾರೆ.

ವೃದ್ಧ ದಂಪತಿಯ ಸಾವಿನ ತನಿಖೆ ನಡೆಸಿದಾಗ ಪೊಲೀಸರಿಗೆ 20ರ ಆಸು-ಪಾಸಿನ ಪುತ್ರರಿಬ್ಬರು ತಂದೆ-ತಾಯಿಯನ್ನು ಕೋಣೆಯಲ್ಲಿ ಕತ್ತುಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಬೆಂಕಿ ಹಚ್ಚಿದ್ದಾರೆ. ಆದರೆ ಪೊಲೀಸರ ಮುಂದೆ ಮಾತ್ರ ತಮ್ಮ ಪೋಷಕರು ಮಲಗಿದ್ದಾಗ ಅವರ ಹೊದಿಕೆಗೆ ಬೆಂಕಿ ಬಿದ್ದ ಪರಿಣಾಮ ಅವರು ಸಜೀವ ದಹನವಾಗಿದ್ದಾರೆ ಎಂದು ಕಥೆ ಕಟ್ಟಿದ್ದಾರೆ. ಆದರೆ ಶವಗಳ ಮರಣೋತ್ತರ ಪರೀಕ್ಷೆಯ ವೇಳೆ ಕತ್ತು ಹಿಸುಕಿ ಕೊಲೆಗೈದು ಬಳಿಕ ಮೃತದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ಬಂದಿದೆ.

ಈ ಸಂಬಂಧ ಎಸ್‍ಎಸ್‍ಪಿ ಸಂಕಲ್ಪ್ ಶರ್ಮಾ ಮಾತನಾಡಿ, ದಂಪತಿಗೆ 4 ಮಂದಿ ಗಂಡು ಮಕ್ಕಳಿದ್ದಾರೆ. ಆಸ್ತಿಗಾಗಿ ಇಬ್ಬರು ಮಕ್ಕಳು ದಂಪತಿಯನ್ನು ಕೊಲೆ ಮಾಡಿದ್ದಾರೆ. ಸದ್ಯ ಈ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿರುವುದಾಗಿ ತಿಳಿಸಿದ್ದಾರೆ. ದಂಪತಿಯ ಇಬ್ಬರು ಗಂಡು ಮಕ್ಕಳು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತಿಬ್ಬರು ಬುಡಾನ್ ನಲ್ಲಿ ವಾಸವಿದ್ದಾರೆ. ಕುಟುಂಬ ಮನೆ ಹಾಗೂ 10 ಎಕರೆ ಕೃಷಿ ಭೂಮಿ ಹೊಂದಿದೆ.

Comments

Leave a Reply

Your email address will not be published. Required fields are marked *