ವಿಷ ಕುಡಿದು ನೇಣು ಬಿಗಿದುಕೊಂಡ ಪ್ರೇಮಿಗಳು- ಪ್ರಿಯಕರ ಸಾವು, ಮರದಿಂದ ಬಿದ್ದ ಪ್ರೇಯಸಿ

– ಒಟ್ಟಾಗಿ ಬದುಕಲು ಸಾಧ್ಯವಿಲ್ಲವೆಂದು ಒಟ್ಟಿಗೆ ಸಾಯಲು ನಿರ್ಧಾರ
– ಕೊನೆ ಕ್ಷಣದಲ್ಲಿ ತಂದೆಗೆ ಫೋನ್ ಮಾಡಿದ ಯುವತಿ

ಹೈದರಾಬಾದ್: ಪೋಷಕರು ಮದುವೆಗೆ ಒಪ್ಪದಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ನಡೆದಿದೆ.

ಇಬ್ರಾಹಿಂ ಪಟ್ಟಣದ ಗುಂಡೆಟ್ಟಿ ರಮ್ಯಾ (22) ಮತ್ತು ಮಂಡಲೋಜಿ ಪ್ರಣೀತ್‍ಚಾರಿ (22) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ರಮ್ಯಾ ಮತ್ತು ಪ್ರಣೀತ್‍ಚಾರಿ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಜಾತಿ ಬೇರೆ ಬೇರೆ ಆಗಿದ್ದರಿಂದ ಎರಡು ಕುಟುಂಬದವರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು.

ಅಲ್ಲದೇ ಇತ್ತೀಚೆಗೆ ರಮ್ಯಾ ಪೋಷಕರು ಆಕೆಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯಿಸಿದ್ದರು. ರಮ್ಯಾ, ತನಗೆ ಈ ಮದುವೆ ಇಷ್ಟವಿಲ್ಲ. ತಾನು ಪ್ರಣೀತ್‍ನನ್ನು ಮದುವೆಯಾಗುತ್ತೇನೆ ಎಂದು ಪೋಷಕರಿಗೆ ಹೇಳಿದ್ದಳು. ಆದರೂ ಪೋಷಕರು ಬಲವಂತವಾಗಿ ಮದುವೆ ಮಾಡಲು ನಿರ್ಧರಿಸಿದ್ದರು. ಕೊನೆಗೆ ಇಬ್ಬರು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎಂದು ಒಟ್ಟಿಗೆ ಸಾಯಲು ನಿರ್ಧರಿಸಿದರು.

ಅದರಂತೆಯೇ ಮಂಗಳವಾರ ರಮ್ಯಾ ಮತ್ತು ಪ್ರಣೀತ್‍ಚಾರಿ ಇಬ್ಬರು ಮನೆಯಿಂದ ಓಡಿಹೋಗಿದ್ದಾರೆ. ಗ್ರಾಮದ ಹೊರವಲಯದಲ್ಲಿ ಕೀಟನಾಶಕವನ್ನು ಸೇವಿಸಿದ್ದಾರೆ. ನಂತರ ಇಬ್ಬರು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಈ ವೇಳೆ ರಮ್ಯಾ ಮರದಿಂದ ಕೆಳಗೆ ಬಿದ್ದಿದ್ದಾಳೆ. ಆದರೆ ಪ್ರಣೀತ್‍ಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದರಿಂದ ಗಾಬರಿಯಾದ ರಮ್ಯಾ ತಕ್ಷಣ ತನ್ನ ತಂದೆಗೆ ಫೋನ್ ಮಾಡಿ ವಿಷ ಕುಡಿದಿರುವ ಬಗ್ಗೆ ತಿಳಿಸಿದ್ದಾಳೆ.

ವಿಷಯ ತಿಳಿದ ತಕ್ಷಣ ತಂದೆ ಸ್ಥಳಕ್ಕೆ ಬಂದು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಮ್ಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *