ವಿಶೇಷಚೇತನ ಮಗು ಮನೆಗೆ ಅಪಶಕುನ ಶಾಪ ಅಂತ ಕೊಂದ ಪಾಪಿ ಚಿಕ್ಕಪ್ಪ

ಚಿಕ್ಕಬಳ್ಳಾಪುರ: ವಿಶೇಷಚೇತನ ಹೆಣ್ಣು ಮಗು ಹುಟ್ಟಿದ್ದೇ ತಪ್ಪಾಯ್ತು. ತಮ್ಮ ಮನೆಗೆ ಅಪಶಕುನ, ಶಾಪ ಅಂತ ಸ್ವತಃ ಚಿಕ್ಕಪ್ಪನೇ 5 ವರ್ಷದ ಹೆಣ್ಣು ಮಗು ಕತ್ತು ಕೊಯ್ದು ಪರಾರಿಯಾಗಿರೋ ಅಮಾನವೀಯ ಹೇಯ ಕೃತ್ಯ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಶಿಕಲಾ-ಕೃಷ್ಣಮೂರ್ತಿ ದಂಪತಿಯ 5 ವರ್ಷದ ಚಾರ್ವಿತಾ ಕೊಲೆಯಾದ ಮಗು. ಕೃಷ್ಣಮೂರ್ತಿ ಸಹೋದರ ಶಂಕರ್ ಕೊಲೆ ಮಾಡಿದ ಪಾಪಿ. ಹುಟ್ಟುವಾಗಲೇ ಮೃತ ಚಾರ್ವಿತಾ ಳ ಒಂದು ಕಾಲಿನ ಪಾದ ಅಂಗವೈಕಲ್ಯಕ್ಕೆ ತುತ್ತಾಗಿತ್ತು. ಆದರೆ ಇದೇ ಮಹಾನ್ ಪಾಪ ತಮ್ಮ ಮನೆಗೆ ಕಳಂಕ ಶಾಪ ಅಂತ ಅಂದಿನಿಂದಲೇ ಚಿಕ್ಕಪ್ಪ ಶಂಕರ್ ಮಗು ಹಾಗೂ ಮನೆಯವರ ಜೊತೆ ಜಗಳವಾಡುತ್ತಿದ್ದ. ಇದೇ ವಿಚಾರದಿಂದ ಶಂಕರ್ ಕಳೆದ ಒಂದು ವರ್ಷದಿಂದ ಮನೆ ಬಿಟ್ಟು ತೋಟದ ಮನೆಯಲ್ಲಿ ವಾಸವಾಗಿದ್ದನು.

ಕಳೆದ 2-3 ತಿಂಗಳಿಂದ ಊಟಕ್ಕೆ ಮತ್ತೆ ಮನೆಗೆ ಬರುವ ಸಲುಗೆ ಬೆಳೆಸಿಕೊಂಡು ಬಂದು ಹೋಗುತ್ತಿದ್ದ. ಮಂಗಳವಾರ ಸಂಜೆ ಮನೆಗೆ ಬಂದ ಚಿಕ್ಕಪ್ಪನನ್ನೇ ಮಗು ಓಡೋಡಿ ಬಂದು ತಬ್ಬಿಕೊಂಡಿದೆ. ಈ ವೇಳೆ ಅದ್ಯಾಕೋ ಏನೋ ಕೋಪಗೊಂಡು ಏಕಾಏಕಿ ಮಗುವನ್ನು ಮನೆಯಿಂದ ಕರೆದುಕೊಂಡು ಹೋಗಿ ದೇವಾಲಯದ ಬಳಿ ಚಾಕುವಿನಿಂದ ಕತ್ತು ಕೊಯ್ದು ಪಾಪಿ ಶಂಕರ್ ಪರಾರಿಯಾಗಿದ್ದಾನೆ.

ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಿದ್ದಾರೆ. ಮುಂದಿನ ಕಾನೂನು ಕ್ರಮ ಕೈಗೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *