ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ಧರ್ಮಸ್ಥಳದಿಂದ ವಾಪಸ್ ಬರ್ತಿದ್ದ ಮೂವರು ಸಾವು

ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ವಿದ್ಯುತ್ ತಗುಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಬಳಿ ನಡೆದಿದೆ. ಮೃತಪಟ್ಟವರನ್ನು ಕಲಾವತಿ (65), ಲೋಹಿತ್ (36) ಮತ್ತು ಶಶಾಂಕ್ (10) ಎಂದು ಗುರುತಿಸಲಾಗಿದೆ.

ರಿಪ್ಪನ್ ಪೇಟೆ ನಿವಾಸಿಗಳಾದ ಇವರು ಎರಡು ದಿನದ ಹಿಂದೆ ರಿಪ್ಪನ್ ಪೇಟೆಯಿಂದ ಧರ್ಮಸ್ಥಳಕ್ಕೆ ಹೋಗಿದ್ದರು. ಟಾಟಾ ಇಂಡಿಕಾ ಕಾರಿನಲ್ಲಿ ಆರು ಮಂದಿ ಹೋಗಿದ್ದರು. ಇಂದು ಮುಂಜಾನೆ ಧರ್ಮಸ್ಥಳದಿಂದ ರಿಪ್ಪನ್ ಪೇಟೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಗರ್ತಿಕೆರೆ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮ ವಿದ್ಯುತ್ ತಗುಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಈ ಘಟನೆ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *