ವಿಡಿಯೋ: ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಜೆಸಿಬಿ ಬಕೆಟ್‍ನಿಂದ ತಲೆಗೆ ಬಡಿದ!

– ವ್ಯಕ್ತಿಯ ತಲೆಗೆ ಗಾಯ
– ಆರೋಪಿ ಮೇಲೆ ಎಫ್‍ಐಆರ್ ದಾಖಲು

ಹೈದರಾಬಾದ್: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪ್ರಶ್ನೆ ಮಾಡಿದನೆಂದು ಚಾಲಕ ಜೆಸಿಬಿ ಬಕೆಟ್‍ನಿಂದ ಆತನ ತಲೆಗೆ ಬಡಿದ ಘಟನೆ ತೆಲಂಗಾಣದ ಮುಲುಗು ಎಂಬಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಸುರೆಯ್ಯ ಮಗ ನೀಡಿದ ದೂರಿನಂತೆ ಆರೋಪಿ ಜೆಸಿಬಿ ಚಾಲಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇತ್ತ ಘಟನೆಯಿಂದ ಸುರೆಯ್ಯ ತಲೆಗೆ ಗಂಭೀರ ಗಾಯಗಳಾಗಿವೆ.

ಕುಡಿದ ಮತ್ತಿನಲ್ಲಿದ್ದ ಸುರೆಯ್ಯ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದಾನೆ. ಅಲ್ಲದೆ ಚಾಲಕನ ಬಳಿ ಇಲ್ಲೇನು ಕೆಲಸ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ವ್ಯಕ್ತಿ ಮಾತಿನಿಂದ ಸಿಟ್ಟುಗೊಂಡ ಚಾಲಕ ವಾಗ್ದಾಳಿ ನಡೆಸಿದ್ದಾನೆ. ಪರಿಣಾಮ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಚಾಲಕ ತನ್ನ ಜೆಸಿಬಿ ಬಕೆಟ್ ನಿಂದ ಸುರೆಯ್ಯ ತಲೆಗೆ ಬಡಿದಿದ್ದಾನೆ. ಆದರೂ ಸುರೆಯ್ಯ ಮಾತ್ರ ಮಾತು ಮುಂದುವರಿಸಿದ್ದ, ಇದರಿಂದ ಮತ್ತಷ್ಟು ಸಿಟ್ಟುಗೊಂಡ ಚಾಲಕ ಜೆಸಿಬಿ ಬಕೆಟ್ ನಿಂದ ಸುರೆಯ್ಯನನ್ನು ದೂಡಿದ್ದಾನೆ. ಈ ವೇಳೆ ಸುರೆಯ್ಯ ನೆಲಕ್ಕುರುಳಿದ್ದಾನೆ ಎಂದು ಮಂಗ್ಪೇಡ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ರಾವ್ ತಿಳಿಸಿದ್ದಾರೆ.

ಘಟನೆಯಿಂದ ಸುರೆಯ್ಯ ಅವರ ತಲೆಗೆ ಗಾಯಗಳಾಗಿದ್ದು, ಆರೋಪಿಯನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *