ವಾಹನದೊಳಗೆ ಅಪ್ರಾಪ್ತೆ ಮೇಲೆ ಗ್ಯಾಂಗ್‍ರೇಪ್- ಮನನೊಂದು ಸಂತ್ರಸ್ತೆ ಆತ್ಮಹತ್ಯೆ

– ನೀರು ತರಲು ಹೋದಾಗ ಟ್ರಕ್‍ಗೆ ಎಳೆದ್ಕೊಂಡು ಹೋದ
– ತನಿಖಾಧಿಕಾರಿಗಳು ಮನೆಗೆ ಬರೋಷ್ಟರಲ್ಲಿ ನೇಣಿಗೆ ಶರಣು

ಲಕ್ನೋ: 16 ವರ್ಷದ ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು, ಮನನೊಂದು ಸಂತ್ರಸ್ತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ನಡೆದಿದೆ.

ಕಾಸಿಮಾಬಾದ್ ಪೊಲೀಸ್ ಠಾಣೆಯ ಪ್ರಾದೇಶಿಕ ವ್ಯಾಪ್ತಿಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಮೇಲೆ ಜೂನ್ 15 ರಂದು ಆಕೆಯ ನೆರೆಹೊರೆಯವನು ಮತ್ತು ಅವನ ಸ್ನೇಹಿತ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಏನಿದು ಪ್ರಕರಣ?
ಮೃತ ಸಂತ್ರಸ್ತೆ ಆರೋಪಿಯ ಮನೆಯ ಹ್ಯಾಂಡ್‍ಪಂಪ್‍ನಿಂದ ನೀರು ತರಲು ಹೋಗಿದ್ದಳು. ಆಗ ಮುನೀಶ್ ಚೌಹಾನ್ ಎಂಬಾತ ಆಕೆಯನ್ನ ತನ್ನ ಸ್ನೇಹಿತ ಯಾದವ್‍ಗೆ ಸೇರಿದ ಟ್ರಕ್‍ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಇಬ್ಬರೂ ವಾಹನದೊಳಗಿನ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ಮನೆಗೆ ಹಿಂತಿರುಗಿ ತನ್ನ ಕುಟುಂಬದವರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಮರುದಿನ ಸಂತ್ರಸ್ತೆ ತಂದೆ ಚೌಹಾನ್ ಮನೆಗೆ ಹೋಗಿದ್ದಾರೆ. ಆದರೆ ಅಲ್ಲಿ ಚೌಹಾನ್ ಕುಟುಂಬ ಸಂತ್ರಸ್ತೆಯ ತಂದೆಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ಅವರು ಕಾಶಿಮಾಬಾದ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದರು.

ಸಂತ್ರಸ್ತೆ ತಂದೆ ನೀಡಿದ ದೂರಿನ ಅನ್ವಯ ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರಲ್ಲಿ ಆರೋಪಿ ಯಾದವ್‍ನನ್ನು ಬಂಧಿಸಲಾಗಿದೆ ಎಂದು ಎಸ್‍ಪಿ ಓಂ ಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ತನಿಖಾ ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಲು ಹೋಗಿದ್ದರು. ಆದರೆ ಅಷ್ಟರಲ್ಲಿಯೇ ಸಂತ್ರಸ್ತೆ ತನ್ನ ಗುಡಿಸಲಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಸಂತ್ರಸ್ತೆಯ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದ ಗ್ರಾಮಸ್ಥರು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ. ನಂತರ ಘಾಜಿಪುರ ಎಸ್‍ಪಿ ಓಂ ಪ್ರಕಾಶ್ ಸಿಂಗ್ ಗ್ರಾಮಸ್ಥರನ್ನು ಸಮಾಧಾನ ಮಾಡಿ, ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *