ವಾಕಿಂಗ್ ಹೋಗ್ತಿದ್ದ ತಂದೆಯನ್ನು ತಲವಾರಿನಿಂದ ಕಡಿದು ಕೊಲೆಗೈದ ಪಾಪಿ ಮಗ

ಮಂಗಳೂರು: ಮದ್ಯಪಾನದ ದಾಸನಾಗಿದ್ದ ಮಗನಿಗೆ ಬುದ್ಧಿವಾದ ಹೇಳಿದ ತಂದೆಯನ್ನೇ ಕುಡುಕ ಮಗ ಬರ್ಬರವಾಗಿ ಕಡಿದು ಹತ್ಯೆಗೈದ ಘಟನೆ ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿಯ ಜ್ಯೂನಿಯರ್ ಕಾಲೇಜು ಬಳಿಯ ನಿವಾಸಿ 65 ವರ್ಷದ ವಾಸು ಮೂಲ್ಯ ಎಂಬವರೇ ಮಗನಿಂದ ಹತ್ಯೆಗೀಡಾದ ದುರ್ದೈವಿ. ಮುಂಜಾನೆ ವಾಸು ಮೂಲ್ಯ ಅವರು ವಾಕಿಂಗ್ ಗೆ ಹೋಗಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ 33 ವರ್ಷದ ಮಗ ದಯಾನಂದ ಮೂಲ್ಯ ತಲವಾರಿನಿಂದ ತಂದೆಗೆ ಹಲ್ಲೆ ನಡೆಸಿದ್ದಾನೆ.

ಗಂಭೀರವಾಗಿ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಾಸು ಮೂಲ್ಯರನ್ನು ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ಟ್ಯಾಕ್ಸಿ ಕಾರ್ ಚಾಲಕರಾಗಿದ್ದ ವಾಸು ಮೂಲ್ಯ ಮಗನಿಗೆ ಕುಡಿತ ಬಿಡುವಂತೆ ಬುದ್ಧಿವಾದ ಹೇಳುತ್ತಿದ್ದರು. ಇದರಿಂದಲೇ ಪ್ರತಿದಿನ ತಂದೆಯೊಂದಿಗೆ ಜಗಳವಾಡುತ್ತಿದ್ದ ಮಗ ದಯಾನಂದ ಕೊನೆಗೂ ತಂದೆಯನ್ನು ಹತ್ಯೆ ನಡೆಸಿದ್ದಾನೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಂದೇಶ್ ಪಿ.ಜಿ., ಪಿಎಸ್‍ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *