ಲಾಕ್‍ಡೌನ್ 4.0 ಕೇಂದ್ರದ ಮಾರ್ಗಸೂಚಿ ಪ್ರಕಟ- ರಾಜ್ಯ ಸರ್ಕಾರದ ಆದೇಶ ವಾಪಸ್

covid

ಬೆಂಗಳೂರು: ಕೇಂದ್ರ ಸರ್ಕಾರ ಲಾಕ್‍ಡೌನ್ 4.0 ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ದಿನಗಳ ಲಾಕ್‍ಡೌನ್ ವಿಸ್ತರಣೆ ಆದೇಶವನ್ನು ಹಿಂಪಡೆದಿದೆ.

ಭಾನುವಾರ ಮಧ್ಯಾಹ್ನವಷ್ಟೇ ರಾಜ್ಯ ಸರ್ಕಾರ ಮೇ 19ರ ವರೆಗೆ ಲಾಕ್‍ಡೌನ್ ಮುಂದುವರಿಕೆ ಮಾಡಿ, ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿತ್ತು. ಇದೀಗ ಕೇಂದ್ರ ಸರ್ಕಾರ ದೇಶಾದ್ಯಂತ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಲಾಕ್‍ಡೌನ್ 4.0 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. ಈ ಮೂಲಕ ಕೇಂದ್ರ ಸರ್ಕಾರದ ಲಾಕ್‍ಡೌನ್ ನಿಯಮಗಳು ಜಾರಿಯಾಗಲಿದ್ದು, ಇನ್ನೂ ಎರಡು ವಾರಗಳ ಕಾಲ ಅಂದರೆ ಮೇ 31ರ ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಅಗತ್ಯ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ.

ಬೆಳಗ್ಗೆಯಿಂದಲೂ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಎದುರು ನೋಡುತ್ತಿತ್ತು. ಮಾರ್ಗಸೂಚಿಗಳ ಪ್ರಕಟ ವಿಳಂಬ ಹಿನ್ನೆಲೆಯಲ್ಲಿ ತನ್ನ ವಿವೇಚನೆ ಅಧಿಕಾರ ಬಳಸಿ ಯಥಾಸ್ಥಿತಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದಿನ ಮಾರ್ಗಸೂಚಿಗಳಂತೆ ಮೇ 19ರವರೆಗೆ ಬಸ್, ಆಟೋ, ಟ್ಯಾಕ್ಸಿ ಸಂಚಾರವಿರಲ್ಲ ಮತ್ತು ಮಾಲ್, ಥಿಯೇಟರ್, ಶಾಲಾ, ಕಾಲೇಜ್, ದೇವಸ್ಥಾನ, ಮಸೀದಿ, ಚರ್ಚ್ ಈ ಹಿಂದಿನಂತೆ ಬಂದ್ ಮಾಡಿ ಆದೇಶಿಸಿತ್ತು.

ರಾಜ್ಯದಲ್ಲಿ ಯಥಾಸ್ಥಿತಿ ಮುಂದುವರಿಸುವಂತೆ ಇಲಾಖೆಗಳಿಗೆ, ಡಿಸಿಗಳಿಗೆ, ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಕೇಂದ್ರದಿಂದ ಲಾಕ್‍ಡೌನ್ 4.0 ಮಾರ್ಗಸೂಚಿ ಪ್ರಕಟವಾಗಿದ್ದು, ಹೀಗಾಗಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ.

Comments

Leave a Reply

Your email address will not be published. Required fields are marked *