ಲಾಕ್‍ಡೌನ್ ಸಂಕಷ್ಟ: ಬಡವರಿಗೆ ಸೈನಿಕ, ರೈಲ್ವೇ ಪೊಲೀಸರಿಂದ ಆಹಾರ ಕಿಟ್ ವಿತರಣೆ

ರಾಯಚೂರು: ಲಾಕ್‍ಡೌನ್ ಹಿನ್ನೆಲೆ ಕೆಲಸವಿಲ್ಲದೆ ಬಡಜನ ನಿಜಕ್ಕೂ ಸಂಕಷ್ಟದ ಪರಸ್ಥಿತಿಯನ್ನ ಎದುರಿಸುತ್ತಿದ್ದಾರೆ. ಹೀಗಾಗಿ ರಾಯಚೂರಿನಲ್ಲಿ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಯೋಧ ರಮೇಶ್ ತನ್ನ ಒಂದು ತಿಂಗಳ ಸಂಬಳದಲ್ಲಿ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

ನಗರದ ಮಂಗಳವಾರಪೇಟೆ ಸ್ಲಂ ನಿವಾಸಿಗಳಿಗೆ ಆಹಾರದ ಕಿಟ್ ನೀಡಿದ್ದಾರೆ. ಕಾಶ್ಮೀರದಿಂದ ರಜೆ ಮೇಲೆ ಬಂದು 10 ದಿನಗಳಾಗಿದ್ದ ಸ್ಲಂ ನಿವಾಸಿಗಳ ಪರಿಸ್ಥಿತಿ ನೋಡಿ ಕೈಲಾದ ಸಹಾಯ ಮಾಡಬೇಕು ಅಂತ ಗೆಳೆಯರ ಸಹಾಯದೊಂದಿಗೆ ಆಹಾರ ಕಿಟ್ ವಿತರಿಸಿದ್ದಾರೆ.

ರೈಲ್ವೇ ಪೊಲೀಸ್ ಠಾಣೆ ಅಧಿಕಾರಿಗಳು ಸಹ ನಿರಂತರವಾಗಿ ಬಡ ಪ್ರಯಾಣಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಆಹಾರ ಸಾಮಗ್ರಿಗಳ ಕಿಟ್, ಮಾಸ್ಕ್ ವಿತರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ವೈಯಕ್ತಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವಂತೆ ತಿಳಿ ಹೇಳುತ್ತಿದ್ದಾರೆ.

ರೈಲ್ವೆ ಎಡಿಜಿಪಿ ಎಸ್. ಭಾಸ್ಕರ್ ರಾವ್, ಕಲುಬುರಗಿ ರೈಲ್ವೆ ಡಿಎಸ್‍ಪಿ ವೆಂಕನಗೌಡ ಪಾಟೀಲ್ ಕಿಟ್ ವಿತರಣೆ ಮಾಡಿದ್ದಾರೆ. ಸಿಪಿಐ ಎನ್ .ಎಸ್ ಜನಗೌಡ ,ಪಿಎಸ್‍ಐ ಮಹೇಶ್ ಮತ್ತು ರೈಲ್ವೇ ಪೊಲೀಸ್ ಠಾಣೆ ಸಿಬ್ಬಂದಿ ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *