‘ಲಾಕ್‍ಡೌನ್ ಮಾಡಿ ಸರ್ ಪ್ಲೀಸ್’ – ಸಂಪುಟ ಸಭೆಯಲ್ಲಿ ಏನಾಯ್ತು? ಇನ್‍ಸೈಡ್ ಸ್ಟೋರಿ

ಬೆಂಗಳೂರು: ಕೋವಿಡ್ 19 ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್‍ಡೌನ್ ನಿರ್ಧಾರದ ಬಗ್ಗೆ ಬಹಳ ಗಂಭೀರ ಚರ್ಚೆ ನಡೆದು ಕೊನೆಗೆ ನಿರ್ಧಾರಕ್ಕೆ ಬರಲಾಗಿದೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಸರ್ಕಾರದ ಬಗ್ಗೆ, ನಮ್ಮ ಬಗ್ಗೆ ಜನ ಆಕ್ರೋಶ ಇದೆ ಎಂದು ಸಭೆಯಲ್ಲಿ ಬಹುತೇಕ ಸಚಿವರ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಲಾಕ್‍ಡೌನ್ ಬೇಡ, ಕಾರ್ಮಿಕರಿಗೆ ಸಂಕಷ್ಟ ಆಗುತ್ತದೆ ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಎಂಟಿಬಿ ನಾಗರಾಜ್, ನನ್ನ ಸಂಬಳ ತಗೋಳಿ, ನನ್ಗೆ ಏನೂ ಸೌಲಭ್ಯ ಬೇಡ. ಮೊದಲು ಒಂದಷ್ಟು ದಿನ ಲಾಕ್ ಡೌನ್ ಮಾಡಿಬಿಡಿ. ಆಕ್ಸಿಜನ್, ಬೆಡ್, ಐಸಿಯು ಕೊರತೆ ಈಗಾಗಲೇ ಹೆಚ್ಚಾಗಿದೆ. ಪ್ಲೀಸ್ ಎಲ್ಲ ಕ್ಲೋಸ್ ಮಾಡಿ ಸರ್. ಹೀಗೆ ಹೇಳಿದ್ರೆ ಜನರನ್ನು ನಿಯಂತ್ರಣ ಮಾಡಲು ಸಾಧ್ಯವೇ ಇಲ್ಲ. ಕೈ ಮುಗಿತೀನಿ, ನಿಮ್ಮ ಕಾಲಿಗೆ ಬೀಳ್ತೀನಿ ಎಂದು ಯಡಿಯೂರಪ್ಪನವರ ಬಳಿ ಮನವಿ ಮಾಡಿದರು.

ಎಂಟಿಬಿ ನಾಗರಾಜ್ ಮನವಿಗೆ ಬಹುತೇಕ ಸಚಿವರು ಧ್ವನಿಗೂಡಿಸಿದರು. ಬಳಿಕ ಈಗಾಗಲೇ ಮಹಾರಾಷ್ಟ್ರ, ದೆಹಲಿಯಲ್ಲಿ ಲಾಕ್‍ಡೌನ್ ಮಾಡಲಾಗಿದೆ. ಸರ್ಕಾರಕ್ಕೆ  ಟೀಕೆ ಬರುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ಕೇಸ್ ದಿನೇ ದಿನೇ ಹೆಚ್ಚಾಗುತ್ತದೆ. ತಜ್ಞರು ಸಹ ಲಾಕ್‍ಡೌನ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಈಗಲೇ ಸಮಸ್ಯೆ ಜಾಸ್ತಿಯಾಗಿದೆ. ಮತ್ತಷ್ಟು ಸಮಸ್ಯೆ ಜಾಸ್ತಿಯಾಗಿ ಕೊನೆಗೆ ಲಾಕ್‍ಡೌನ್ ಮಾಡುವುದಕ್ಕಿಂತ ಈಗಲೇ ಕಠಿಣ ನಿರ್ಧಾರಕ್ಕೆ ಬರುವುದು ಉತ್ತಮ ಎಂಬ ಸಲಹೆ ವ್ಯಕ್ತವಾಗಿದೆ. ಹೀಗಾಗಿ ಲಾಕ್‍ಡೌನ್ ಮಾಡಲ್ಲ ಎಂದು ಆರಂಭದಿಂದ ಹೇಳುತ್ತಾ ಬಂದಿದ್ದ ಸಿಎಂ ಸಭೆಯಲ್ಲಿ ವ್ಯಕ್ತವಾದ ಸಲಹೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *