ಲಾಕ್‍ಡೌನ್ ಮಧ್ಯೆಯೂ ಪಡಿತರಕ್ಕಾಗಿ ನೂಕುನುಗ್ಗಲು

-ರಾಯಚೂರಿನಲ್ಲಿ ಬ್ಯಾರಿಕೇಡ್ ತೆಗೆದು ಓಡಾಟ

ರಾಯಚೂರು: ಲಾಕ್‍ಡೌನ್ ಮಧ್ಯೆಯೂ ಪಡಿತರ ತೆಗೆದುಕೊಳ್ಳಲು ರಾಯಚೂರಿನಲ್ಲಿ ಜನ ನೂಕು ನುಗ್ಗಲು ಮಾಡಿದ್ದಾರೆ. ಸಾಮಾಜಿಕ ಅಂತರವನ್ನ ಮರೆತು ನ್ಯಾಯ ಬೆಲೆ ಅಂಗಡಿ ಮುಂದೆ ಗುಂಪುಗುಂಪಾಗಿ ನಿಂತು ಜನ ಪಡಿತರ ಪಡೆಯುತ್ತಿದ್ದಾರೆ. ನಗರದ ಸಿಯತಲಾಬ್ ನ್ಯಾಯಬೆಲೆ ಅಂಗಡಿ ಮುಂದೆ ಜನ ಸಂದಣಿ ಹೆಚ್ಚಾದ ಹಿನ್ನೆಲೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜನರನ್ನ ನಿಯಂತ್ರಿಸಿದ್ದಾರೆ.

ಮಾಸ್ಕ್ ಧರಿಸದೆ ಪಡಿತರಕ್ಕಾಗಿ ಸಾಲಲ್ಲಿ ನಿಂತ ಜನ ನೂಕುನುಗ್ಗಲು ಮಾಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪಡಿತರ ವಿತರಣೆ ಮಾಡುತ್ತಿರುವುದರಿಂದ ಜನ ಗುಂಪು ಸೇರಿದ್ದಾರೆ. ಪಡಿತರ ವಿತರಣೆ ಅವಧಿ ಕಡಿತವಾಗಿದ್ದರಿಂದ ಜನ ಹೆಚ್ಚು ಸೇರಬೇಕಾಗಿದೆ, ಬೆಳಗ್ಗೆಯಿಂದ ಸಂಜೆವರೆಗೆ ಪಡಿತರ ವಿತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇನ್ನೂ ರಾಯಚೂರಿನಲ್ಲಿ ಕೊರೊನಾ ವೈರಸ್ ಭೀತಿಯೇ ಮಾಯಾವಾಗಿದ್ದು ಜನ ಎಂದಿನಂತೆ ಓಡಾಡುತ್ತಿದ್ದಾರೆ. ಲಾಕ್‍ಡೌನ್‍ನ ನಾಲ್ಕನೇ ದಿನವೂ ರಾಯಚೂರಿನಲ್ಲಿ ಪರಿಸ್ಥಿತಿ ಬದಲಾಗಿಲ್ಲ. ಬ್ಯಾರಿಕೇಡ್ ಗಳನ್ನ ತೆಗೆದು ಜನ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‍ಡೌನ್ ಬಿಗಿಗೊಳಿಸಲು ಪೊಲೀಸರು ವಾಹನಗಳ ಜಪ್ತಿಮಾಡಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆಟೋ, ಕಾರು, ಬೈಕ್ ಗಳನ್ನು ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *