ಲಾಕ್‍ಡೌನ್ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ, ಇಲ್ಲಾಂದ್ರೆ ಕಾನೂನು ಕ್ರಮ: ರವಿ ಚನ್ನಣ್ಣವರ್ ಎಚ್ಚರಿಕೆ

ನೆಲಮಂಗಲ: ಮಾಹಾಮಾರಿ ಕೊರೊನಾ ವೈರಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಎರಡನೇ ಹಂತದ ಲಾಕ್‍ಡೌನ್ ಜಾರಿಗೆ ತಂದಿದ್ದು, ಬೆಂಗಳೂರು ನಗರದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದೆ.

ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗಡಿ ಭಾಗದಲ್ಲಿ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ತಾಲೂಕಿನ ಗಡಿ ಭಾಗದಲ್ಲಿ ನಾಲ್ಕು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ಇಂದು ಐಜಿ ಸೀಮಂತ್ ಕುಮಾರ್ ಸಿಂಗ್ ಹಾಗೂ ಗ್ರಾಮಾಂತರ ಎಸ್ಪಿ ರವಿ.ಡಿ ಚನ್ನಣ್ಣವರ್ ಭೇಟಿ ನೀಡಿ, ವಾಹನಗಳ ತಪಾಸಣೆ ಮಾಡಿ ಭದ್ರತೆಯನ್ನ ವೀಕ್ಷಿಸಿದರು. ನಂತರ ಮಂಗಳೂರು ರಸ್ತೆಯ ಲ್ಯಾಕೊ ಟೋಲ್‍ಗೆ ಎಸ್‍ಪಿ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿದರು.

ವಯಸ್ಸಾದ ಸಿಬ್ಬಂದಿಗೆ ರಜೆ ಪಡೆಯಲು ಅವಕಾಶ ಇದ್ದು, ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಜನರ ಒಳಿತಿಗಾಗಿ ಮತ್ತೆ ರಾಜ್ಯ ಸರ್ಕಾರ ಲಾಕ್‍ಡೌನ್ ನಿಯಮವನ್ನ ಜಾರಿಗೆ ತಂದಿದೆ. ನಮ್ಮ ಸಿಬ್ಬಂದಿ ಭದ್ರತೆಗೆ ಪಿಪಿಇ ಕಿಟ್ ಸ್ಯಾನಿಟೈಸರ್, ಮಾಸ್ಕ್ ನೀಡಲಾಗಿದೆ. ಲಾಕ್ ಡೌನ್ ವೇಳೆ ಅನಗತ್ಯ ಓಡಾಡುವವರ ವಿರುದ್ಧ ಕೇಸ್ ದಾಖಲು ಮಾಡಲಾಗುತ್ತದೆ. ದಯಮಾಡಿ ಜನರು ಲಾಕ್ ಡೌನ್ ನಿಯಮ ಪಾಲನೆ ಮಾಡುವಂತೆ ಮನವಿ ಮಾಡಿಕೊಂಡರು.

ಬೆಳಗ್ಗಿನಿಂದ ತುಂತುರು ಮಳೆಯಾಗುತ್ತಿದ್ದು ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣೆ ಮಾಡುವ ಕೊರೊನಾ ವಾರಿಯರ್ಸ್‍ಗೆ ಸೂಕ್ತ ವ್ಯವಸ್ಥೆ ಇಲ್ಲ ಎಂದು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ನೆಲಮಂಗಲ ತಾಲೂಕಿನ ಗಡಿ ಭಾಗದಲ್ಲಿ ನಾಲ್ಕು ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದು, ತುಂತುರು ಮಳೆಯ ನೀರು ಒಳಗೆ ಬರುತ್ತದೆ. ಪೆಂಡಾಲ್ ಕೆಳಗೆ ಕೆಲಸ ನಿರ್ವಹಿಸಲು ಹೇಗೆ ಸಾಧ್ಯ ಹಾಗೂ ತುಂತುರು ಮಳೆ ಚಳಿಯಲ್ಲಿ ಕೊರೊನಾ ವಾರಿಯರ್ಸ್ ಕೆಲಸ ಮಾಡುವುದು ಹೇಗೆ ಎಂದು ಸುದ್ದಿ ಪ್ರಸಾರವಾಗಿತ್ತು. ಇದನ್ನ ಕೂಡಲೇ ತೆರವು ಮಾಡಿ ಸರಿಪಡಿಸುವುದಾಗಿ ತಾಲೂಕು ಕಂದಾಯ ಅಧಿಕಾರಿಗಳಿಗೆ ತಿಳಿಸಿ ವ್ಯವಸ್ಥೆ ಮಾಡಿಸುವುದಾಗಿ ಎಸ್‍ಪಿ ಭರವಸೆ ನೀಡಿದರು.

ಈ ವೇಳೆ ಟ್ರಾಫಿಕ್ ಸಿಪಿಐ ವೀರೇಂದ್ರ ಪ್ರಸಾದ್, ಶಿವಣ್ಣ, ಪಿಎಸ್‍ಐ ಅಂಜನ್ ಕುಮಾರ್, ಮೋಹನ್ ಕುಮಾರ್ ಆರೋಗ್ಯ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಇದ್ದರು.

Comments

Leave a Reply

Your email address will not be published. Required fields are marked *