ಲಾಕ್‍ಡೌನ್ ಉಲ್ಲಂಘಿಸಿದ್ದಕ್ಕೆ ಬೈಕ್ ಸೀಜ್- ಮನನೊಂದು ಬೆಂಕಿ ಹಚ್ಚಿಕೊಂಡ ಯುವಕ

ಚೆನ್ನೈ: ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕೆ ಪೊಲೀಸರು ಬೈಕ್ ಸೀಜ್ ಮಾಡಿದ್ದಾರೆ. ಆದರೆ ಇದರಿಂದ ಮನನೊಂದ ಯುವಕ ಚಿಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಿರುಪತ್ತೂರು ಜಿಲ್ಲೆಯ ಅಂಬುರ್ ಪಟ್ಟಣದಲ್ಲಿ ನಡೆದಿದೆ.

ಯುವಕನನ್ನು ಮುಗಿಲನ್ ಎಂದು ಗುರುತಿಸಲಾಗಿದೆ. ಅಂಬುರ್ ಪಟ್ಟಣದಲ್ಲಿರುವ ಅಣ್ಣ ನಗರ್ ನಿವಾಸಿಯಾಗಿರುವ ಈತ ಲಾಕ್ ಡೌನ್ ಘೋಷನೆ ಮಾಡಿದರೂ, ನಿಯಮವನ್ನು ಉಲ್ಲಂಘಿಸಿ ಭಾನುವಾರ ತನ್ನ ಬೈಕಿನಲ್ಲಿ ಸುತ್ತಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈತನ ಬೈಕ್ ಸೀಜ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಈಗಾಗಲೇ ಜುಲೈ 31ರವರೆಗೆ ಪ್ರತಿ ಭನುವಾರ ಕಂಪ್ಲೀಟ್ ಲಾಕ್ ಡೌನ್ ಘೋಷಿಸಲಾಗಿದೆ. ಹೀಗಾಗಿ ಪೊಲೀಸರು ಪ್ರತಿ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲೂ ತಪಾಸಣೆ ನಡೆಸುತ್ತಿದ್ದಾರೆ. ಅಂತೆಯೇ ಒಂದು ಚೆಕ್ ಪೋಸ್ಟಿನಲ್ಲಿ ಅಂದರೆ ಮುಗಿಲನ್ ಮನೆ ತಲುಪಲು ಇನ್ನೇನು ಕೆಲವೇ ಮೀಟರ್ ನಷ್ಟು ದೂರ ಇರುವಾಗ ಆತನನ್ನು ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ಪೊಲೀಸರಿಗೆ ಸರಿಯಾಗಿ ಉತ್ತರ ನೀಡಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟುಗೊಂಡ ಪೊಲೀಸರು ಮುಗಿಲನ್ ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೆ ಯುವಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್ ಸೀಜ್ ಮಾಡಿದ್ದರಿಂದ ಸಿಟ್ಟುಗೊಂಡ ಯುವಕ, ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾನೆ. ಆದರೆ ಪೊಲೀಸರು ಯುವಕನಿಗೆ ಬೈಕ್ ವಾಪಸ್ ಕುಡಲು ನಿರಾಕರಿಸಿದ್ದಾರೆ. ಇದರಿಂದ ಮನನೊಂದ ಯುವಕ ಕಾಲ್ನಡಿಗೆಯಲ್ಲೇ ಮನೆಗೆ ತೆರಳಿದ್ದಾನೆ. ಅಲ್ಲದೆ ಮನೆಯಿಂದ ಸೀಮೆ ಎಣ್ಣೆ ತೆಗೆದುಕೊಂಡು ಬಂದು ಚೆಕ್ ಪೋಸ್ಟ್ ಗೆ ಕೆಲ ದೂರ ಇರುವಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಅದನ್ನು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಯುವಕ, ಪೊಲೀಸರು ಕಾರಣವಿಲ್ಲದೆ ನನ್ನನ್ನು ತಡೆದಿದ್ದಾರೆ. ನನ್ನ ಸಾವಿಗೆ ಪೊಲೀಸರೇ ನೇರ ಕಾರಣರಾಗಿದ್ದಾರೆ. ನಾನು ಇನ್ನು ಕೆಲವೇ ಕ್ಷಣಗಳಲ್ಲಿ ಸಾಯುತ್ತಿದ್ದೇನೆ ಎಮದು ಕಿರುಚಾಡುವುದು ಕೇಳಿಸುತ್ತಿದೆ ಎಂದು ವರದಿಯಾಗಿದೆ.

ಇತ್ತ ಯುವಕ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಕೂಡಲೇ ಆತನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ ಯುವಕ ಮದ್ಯಪಾನ ಮಾಡಿದ್ದು, ಬೆಂಕಿ ಹಚ್ಚಿಕೊಂಡಿದ್ದರಿಂದ ಆತನ ದೇಹ 80ರಷ್ಟು ಸುಟ್ಟುಹೋಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ತಿರುಪತ್ತೂರು ಎಸ್ ಪಿ ತನಿಖೆ ನಡೆಸುವಂತೆ ಸುಚಿಸಿದ್ದಾರೆ. ಅಲ್ಲದೆ ಎಫ್‍ಐಆರ್ ಕೂಡ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *