ಲಸಿಕೆ ಪಡೆದು ಜಾಗೃತಿ ಮೂಡಿಸಿದ ಡಾ. ಭುಜಂಗ ಶೆಟ್ಟಿ

ಬೆಂಗಳೂರು: ನಾರಾಯಣ ನೇತ್ರಾಲಯದ ನಿರ್ದೇಶಕ ಡಾ.ಭುಜಂಗ ಶೆಟ್ಟಿ ಇಂದು ಕೋವಿಡ್‌ ಲಸಿಕೆಯನ್ನು ಪಡೆದು ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ಲಸಿಕೆ ವಿತರಣಾ ಕಾರ್ಯಕ್ರಮದ ಮೂರನೇ ದಿನವಾದ ಇಂದು ಬೆಂಗಳೂರಿನ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ವ್ಯಾಕ್ಸಿನ್ ವಿತರಣೆ ನಡೆಯುತ್ತಿದೆ.

ನಗರದ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕೋವಿಡ್ ಲಸಿಕೆ ಹಂಚಿಕೆಗೆ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಖಾತೆಯ ಸಚಿವ ಗೋಪಾಲಯ್ಯ ಚಾಲನೆ ನೀಡಿದರು. ಈ ವೇಳೆ  ಡಾ.ಭುಜಂಗ ಶೆಟ್ಟಿ ಎರಡನೇ ಲಸಿಕೆಯನ್ನು ತೆಗೆದುಕೊಂಡು ಕೊರೊನಾ ಲಸಿಕೆಯನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕೆಂದು ಜಾಗೃತಿ ಮೂಡಿಸಿದರು.

ಲಸಿಕಾ ಅಭಿಯಾನವನ್ನು ಉದ್ಘಾಟಿಸಿದ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ಮಾತನಾಡಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಲಸಿಕಾ ಕಾರ್ಯಕ್ರಮ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಎಲ್ಲೆಡೆ ವ್ಯಾಕ್ಸಿನ್ ಹಂಚಿಕೆಯಾಗುತ್ತಿದ್ದು, ನಾರಾಯಣ ನೇತ್ರಾಲಯದಲ್ಲಿ ಭುಜಂಗ ಶೆಟ್ಟಿ ಹಾಗೂ ಅವರ ಸಿಬ್ಬಂದಿಗೆ ಕೊರೊನಾ ಲಸಿಕೆ‌ ನೀಡಲಾಗುತ್ತಿದೆ ಇದು ಉತ್ತಮ ಅಭಿಯಾನ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ನಾರಾಯಣ ನೇತ್ರಾಲಯದ ನಿರ್ದೇಶಕ ಭುಜಂಗ ಶೆಟ್ಟಿ ಮಾತನಾಡಿ, ನನಗೆ ತುಂಬ ಖುಷಿಯಾಗುತ್ತಿದೆ. ಭಾರತದಲ್ಲಿ ತಯಾರಾಗಿರುವ ಮೊದಲ ಲಸಿಕೆಯಿದು. ಈ ಕಾರಣಕ್ಕೆ ನಮ್ಮ ವಿಜ್ಞಾನಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಒಳ್ಳೆಯ ಲಸಿಕೆ. ಎಲ್ಲರೂ ಲಸಿಕೆ ಪಡೆಯಬೇಕು. ವ್ಯಾಕ್ಸಿನ್ ಪಡೆದ ನಂತರವೂ ಕೊರೊನಾ ಮುಂಜಾಗ್ರತಾ ಕ್ರಮ ಇರಲೇಬೇಕು ಎಂದರು.

ಬಿಬಿಎಂಪಿ ಅವರ ಈ ಕೆಲಸ ತುಂಬ ಪ್ರಮುಖವಾಗಿದೆ.  ಲಸಿಕೆ ತೆಗೆದುಕೊಂಡ ನಂತರ ಮದ್ಯಪಾನ ಮಾಡಬಾರದು ಹಾಗೂ ಸಿಗರೇಟ್ ಸಹ ಸೇದಬಾರದು ಎಂದು ಡಾ. ಭುಜಂಗಶೆಟ್ಟಿ ಸಲಹೆ ನೀಡಿದರು. ಇವತ್ತು 200 ಜನ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಲಿದ್ದಾರೆ.

Comments

Leave a Reply

Your email address will not be published. Required fields are marked *