ಲವ್ ಜಿಹಾದ್‍ಗೆ ಯುಪಿ ಮಾದರಿ ಕಾನೂನು ತರಬೇಕು: ಆರ್. ಅಶೋಕ್

ಬೆಂಗಳೂರು: ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಲವ್ ಜಿಹಾದ್ ಗೆ ಕಾನೂನು ತರಬೇಕು. ಈ ಸಂಬಂಧ ಗೃಹ ಸಚಿವರು ಮತ್ತು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗುತ್ತಿವೆ. ಲವ್ ಮಾಡಿ ಮದುವೆಯಾಗಿ ಮತಾಂತರ ಮಾಡಲೆಂದೇ ಯುವಕರಿಗೆ ತರಬೇತಿ ನೀಡುವ, ಬೈಕ್, ಬಟ್ಟೆ ಕೊಡಿಸುವ ಗುಂಪುಗಳು ರಾಜ್ಯದಲ್ಲಿ ಸಕ್ರೀಯವಾಗಿವೆ. ಲವ್ ಜಿಹಾದ್ ಗೆ ಬಲಿಯಾಗಿ ಬದುಕು ಬರ್ಬಾದ್ ಮಾಡಿಕೊಳ್ಳುವ ಹೆಣ್ಣುಮಕ್ಕಳ ರಕ್ಷಣೆಗಾಗಿ ಕಾನೂನು ತರಬೇಕಾಗಿದೆ ಎಂದರು.

ಇದೇ ವೇಳೆ ಆರ್.ಆರ್.ನಗರದಲ್ಲಿನ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸ್ವ ಗ್ರಾಮಗಳಿಗೆ ಮರು ವಲಸೆ ಹೋಗಿದ್ದರು. ಹಾಗಾಗಿ ಆರ್.ಆರ್.ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಇಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಎಂದು ನಂಬಿದ್ದವರು ಮತ ಚಲಾವಣೆ ಮಾಡಿಲ್ಲ. ಆದರೆ ಸ್ಥಳೀಯರು ಹಾಗೂ ಬಿಜೆಪಿಯ ಪಾರಂಪರಿಕ ಮತದಾರರೆಲ್ಲಾ ಬಂದು ವೋಟ್ ಮಾಡಿದ್ದಾರೆ. ಇದರಿಂದಾಗಿ ಆರ್.ಆರ್.ನಗರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿ ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.

ಸೊಸೆ ನನಗೆ ಮಗಳಿದ್ದಂತೆ ಎಂದು ಡಿ.ಕೆ ರವಿ ತಾಯಿ ಹೇಳಿಕೆ ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ ರವಿಯವರ ತಾಯಿಯಿಂದ ಹೇಳಿಕೆ ಕೊಡಿಸಿರೋದು ಡಿ.ಕೆ ಸಹೋದರರ ಗಿಮಿಕ್ ಅಷ್ಟೇ. ಡಿ.ಕೆ ರವಿಯವರ ತಾಯಿ ಬೇಕಾದರೆ ಮಾಧ್ಯಮಗಳ ಮುಂದೆ ಬಂದು ಹೇಳಬೇಕಾಗಿತ್ತು. ಆದರೂ ಅವರ ಸಂಸಾರ ಸರಿಹೋಗಲಿ. ಕಿತ್ತಾಡಿಕೊಂಡಿರುವ ಅತ್ತೆ ಸೊಸೆ ಸರಿಹೋಗಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *