ಲಡಾಖನ್ನು ಕಾನೂನು ಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಲಾಗಿದೆ- ಮತ್ತೆ ಚೀನಾ ಕ್ಯಾತೆ

ನವದೆಹಲಿ: ಗಡಿ ಪ್ರದೇಶದಲ್ಲಿ 44 ಹೊಸ ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಚಾರಕ್ಕೆ ಮುಕ್ತಗೊಳಿಸಿದ ಬೆನ್ನಲ್ಲೇ ಇದೀಗ ಚೀನಾ ಲಡಾಖ್ ವಿಚಾರದಲ್ಲಿ ಮೂಗು ತೂರಿಸುತ್ತಿದೆ.

ಭಾರತ ಅಕ್ರಮವಾಗಿ ಮಾಡಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ಪರಿಗಣಿಸುವುದಿಲ್ಲ. ಆದರೆ ಆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವುದನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ಹೇಳಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಈ ಕುರಿತು ಹೇಳಿಕೆ ನೀಡಿದ್ದು, ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಎರಡೂ ಕಡೆಯ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ. ಉದ್ವಿಗ್ನತೆ ಹೆಚ್ಚಿಸುವ ರೀತಿ ಯಾವುದೇ ದೇಶ ಕ್ರಮ ಕೈಗೊಳ್ಳಬಾರದು ಎಂದು ಹೇಳಿದ್ದಾರೆ.

ಲಡಾಖ್‍ನಲ್ಲಿ 8 ಹಾಗೂ ಅರುಣಾಚಲ ಪ್ರದೇಶದಲ್ಲಿ 8 ಸೇತುವೆ ಸೇರಿದಂತೆ ಭಾರತದಲ್ಲಿ ಉದ್ಘಾಟಿಸಲಾಗಿರುವ ಹಲವು ಸೇತುವೆಗಳ ಕುರಿತು ಪ್ರತಿಕ್ರಿಯಿಸುವಂತೆ ಅವರು ಕೇಳಿದ್ದಾರೆ. ಕಾನೂನು ಬಾಹಿರವಾಗಿ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿರುವುದನ್ನು ಚೀನಾ ಪರಿಗಣಿಸುವುದಿಲ್ಲ. ಆದರೆ ಗಡಿಯುದ್ದಕ್ಕೂ ಸೇನೆ ಜಮಾವಣೆಗೊಳಿಸುವುದು ಹಾಗೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದನ್ನು ವಿರೋಧಿಸುತ್ತೇವೆ. ಪರಿಸ್ಥಿತಿ ಉದ್ವಿಗ್ನಗೊಳಿಸುವಂತೆ ಗಡಿಯಲ್ಲಿ ಕ್ರಮ ಕೈಗೊಳ್ಳಬಾರದು. ಈ ಮೂಲಕ ಗಡಿಯಲ್ಲಿ ಪರಿಸ್ಥಿತಿ ತಿಳಿಗೊಳಿಸುವ ಎರಡೂ ಕಡೆಯ ಪ್ರಯತ್ನಗಳನ್ನು ದುರ್ಬಲಗೊಳಿಸಬಾರದು ಎಂದು ಹೇಳಿದ್ದಾರೆ.

ಗಡಿಯಲ್ಲಿ ಮೂಲಭುತ ಸೌಕರ್ಯ ನಿರ್ಮಿಸುವುದು ಹಾಗೂ ಗಡಿಯುದ್ದಕ್ಕೂ ಸೇನೆಯನ್ನು ಹಾಕುವುದರಿಂದ ಎರಡೂ ಕಡೆ ಒತ್ತಡ ಹೆಚ್ಚುತ್ತದೆ. ಒಮ್ಮತದ ಶ್ರದ್ಧೆಯನ್ನು ಕಾರ್ಯಗತಗೊಳಿಸಿ, ಪರಿಸ್ಥಿತಿ ಉಲ್ಬಣಿಸಬಹುದಾದ ಕ್ರಮಗಳಿಂದ ದೂರವಿರುವ ಮೂಲಕ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಝಾವೋ ಹೇಳಿದ್ದಾರೆ.

ಹೊಸ ಸೇತುವೆಗಳ ನಿರ್ಮಾಣದಿಂದ ಸೇನೆ ಹಾಗೂ ಶಸ್ತ್ರಾಸ್ತ್ರಗಳನ್ನು ವೇಗವಾಗಿ ಗಡಿ ಬಳಿಗೆ ಕೊಂಡೊಯ್ಯಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *