ಲಂಡನ್‍ನಿಂದ ಬಂದವರನ್ನ ಬಸ್‍ಗಳಲ್ಲಿ ಹೋಟೆಲ್‍ಗಳಿಗೆ ಶಿಫ್ಟ್

– ಸರ್ಕಾರದ ವಿರುದ್ಧ ಪ್ರಯಾಣಿಕರು ಗರಂ
– ಸರ್ಕಾರದಿಂದ ಎರಡು ಸಾವಿರ ಹೋಟೆಲ್ ಬುಕ್

ಮುಂಬೈ: ಮಹಾರಾಷ್ಟ್ರ ಸರ್ಕಾರ ಹೊಸ ಆದೇಶದ ಹಿನ್ನೆಲೆ ಇಂದು ಬೆಳಗಿನ ಜಾವ ಮುಂಬೈಗೆ ಬಂದಿಳಿದ ಪ್ರಯಾಣಿಕರನ್ನ 14 ದಿನದ ಕ್ವಾರಂಟೈನ್ ಗಾಗಿ ಹೋಟೆಲ್ ಗಳಿಗೆ ಶಿಫ್ಟ್ ಮಾಡಲಾಗಿದೆ. ಇಂದು ಬೆಳಗ್ಗೆ ಲಂಡನ್ ನಿಂದ ಎರಡು ಫ್ಲೈಟ್ ಗಳಲ್ಲಿ ಬಂದಪ್ರಯಾಣಿಕರನ್ನ ಸಾರಿಗೆ ಬಸ್ ಗಳ ಮೂಲಕ ವಿವಿಧ ಹೋಟೆಲ್ ಗಳಿಗೆ ರವಾನಿಸಿದೆ.

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಸರ್ಕಾರದ ಹೊಸ ಅದೇಶದ ಬಗ್ಗೆ ಆಕ್ರೋಶ ಹೊರ ಹಾಕಿ ಬಸ್ ಹತ್ತಿದ್ದಾರೆ. ಟಿಕೆಟ್ ಬುಕ್ ಮಾಡುವಾಗ ಈ ರೀತಿಯ ಯಾವುದೇ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇಲ್ಲಿಗೆ ಬಂದ ಮೇಲೆ ಸಂಜೆ ಸರ್ಕಾರ ಹೊರಡಿಸಿರುವ ಸೂಚನೆ ತಿಳಿದಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ಇನ್ನು ಕೆಲ ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಮಾತನಾಡದೇ ಸರ್ಕಾರದ ನಿಯಮಗಳನ್ನ ಪಾಲಿಸೋದಾಗಿ ಸಹ ಹೇಳಿದ್ದಾರೆ.

2 ಸಾವಿರ ಹೋಟೆಲ್ ಬುಕ್: ಪ್ರಯಾಣಿಕರನ್ನು ಅವರ ಕುಟುಂಬಸ್ಥರ ಭೇಟಿಗೂ ಅಧಿಕಾರಿಗಳು ಅವಕಾಶ ನೀಡಿಲ್ಲ. ಸರ್ಕಾರದ ನಿಯೋಜಿಸಿದ್ದ 50 ಸಾರಿಗೆ ಬಸ್ ಗಳಲ್ಲಿಯೇ ಎಲ್ಲರನ್ನೂ ವಿಮಾನ ನಿಲ್ದಾಣದಿಂದ ನೇರವಾಗಿ ಹೋಟೆಲ್ ಗಳಿಗೆ ಶಿಫ್ಟ್ ಮಾಡಲಾಗಿದೆ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈನ 2 ಸಾವಿರ ಹೋಟೆಲ್ ಗಳನ್ನು ಕ್ವಾರಂಟೈನ್ ಗಾಗಿ ಬುಕ್ ಮಾಡಿಕೊಂಡಿದೆ. ಪ್ರಯಾಣಿಕರನ್ನ ಹೋಟೆಲ್ ಗಳಿಗೆ ಶಿಫ್ಟ್ ಮಾಡಿದ ಕೂಡಲೇ ಬಸ್ ಗಳನ್ನ ಸ್ಯಾನಿಟೈಸ್ ಮಾಡಲಾಗಿದೆ.

ಮಹಾರಾಷ್ಟ್ರದಲ್ಲಿ ಜನವರಿ 5ರ ವರೆಗೆ ನೈಟ್ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಇಂಗ್ಲೆಂಡ್‍ನಲ್ಲಿ ಕೊರೊನಾ ಹೊಸ ರೂಪ ತಾಳಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 11ರಿಂದ ಬೆಳಗ್ಗೆ 6 ಗಂಟೆ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ.

14 ದಿನ ಸಾಂಸ್ಥಿಕ ಕ್ವಾರಂಟೈನ್: ಯೂರೋಪಿಯನ್ ಹಾಗೂ ಮಧ್ಯಪ್ರಾಚ್ಯ ದೇಶಗಳಿಂದ ಬರುವವರು 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿದೆ. ಅಲ್ಲದೆ ಮಹಾರಾಷ್ಟ್ರಕ್ಕೆ ಆಗಮಿಸಿದ 5 ಅಥವಾ 7ನೇ ದಿನ ಕೊರೊನಾ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವಾಗಿದೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೊರೊನಾ ಹರಡುವ ಮುನ್ನೆಚ್ಚರಿಕೆಯಾಗಿ ಕ್ರಮ ಕೈಗೊಳ್ಳಲಾಗಿದೆ.

ವಿದೇಶದಿಂದ ಆಗಮಿಸುವ ಪ್ರಯಾಣಿಕರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದರೆ ಪ್ರತ್ಯೇಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಅಲ್ಲದೆ ವಿದೇಶದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಹೋಮ್ ಕ್ವಾರಂಟೈನ್ ಕಡ್ಡಾಯವಾಗಿದೆ. ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *