ರೋಹಿತ್ ಶರ್ಮಾ ಕ್ಯಾಪ್ಟನ್ ಆಗದಿದ್ದರೆ ದೇಶಕ್ಕೆ ನಷ್ಟ: ಗಂಭೀರ್

ನವದೆಹಲಿ: ಟೀಂ ಇಂಡಿಯಾ ಸೀಮಿತ ಓವರ್ ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾರನ್ನು ಕ್ಯಾಪ್ಟನ್ ಮಾಡಬೇಕು ಎಂಬ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮಾ 5ನೇ ಐಪಿಎಲ್ ಟ್ರೋಪಿಯನ್ನು ಗೆದ್ದು ತಂದಿದ್ದು, ಇದೇ ವೇಳೆ ಟೀಂ ಇಂಡಿಯಾ ಪರ ಕನಿಷ್ಠ ಸೀಮಿತ ಓವರ್ ಗಳ ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾ ಭಾರತದ ತಂಡದ ನಾಯಕ ಆಗದಿದ್ದರೆ ಅದು ದೇಶಕ್ಕೆ ನಷ್ಟ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ರೋಹಿತ್ ಶರ್ಮಾರನ್ನ ಟೀಂ ಇಂಡಿಯಾ ಟಿ20 ತಂಡಕ್ಕೆ ಕ್ಯಾಪ್ಟನ್ ಮಾಡಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಕೂಡ ರೋಹಿತ್ ಶರ್ಮಾ ಪರ ಬ್ಯಾಟ್ ಬೀಸಿದ್ದಾರೆ.

ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್‍ನಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡಬೇಕು. ರೋಹಿತ್ ಶರ್ಮಾಗೆ ನಾಯಕತ್ವ ನೀಡದಿದ್ದರೆ ಅದು ಆತನಿಗೆ ನಷ್ಟವಿಲ್ಲ. ಆದರೆ ಇದರಿಂದ ಭಾರತಕ್ಕೆ ನಷ್ಟವಾಗಲಿದೆ. ಧೋನಿಯನ್ನು ಟೀಂ ಇಂಡಿಯಾ ಪರ ಅತ್ಯಂತ ಯಶಸ್ವಿ ನಾಯಕ ಎಂದು ಕರೆಯುತ್ತಾರೆ. ಏಕೆಂದರೆ ಧೋನಿ ನಾಯಕತ್ವದಲ್ಲಿ 2 ವಿಶ್ವಕಪ್ ಸೇರಿದಂತೆ 3 ಐಪಿಎಲ್ ಟ್ರೋಫಿಗಳನ್ನು ಗೆದ್ದು ತಂದಿದ್ದಾರೆ. ರೋಹಿತ್ 5 ಐಪಿಎಲ್ ಟ್ರೋಫಿಗಳನ್ನು ಗೆದ್ದುಕೊಂಡಿದ್ದು, ಐಪಿಎಲ್ ಇತಿಹಾಸದಲ್ಲೇ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ ಎಂದು ಗಂಭೀರ್ ಹೇಳಿದ್ದಾರೆ.

ನಾಯಕತ್ವದ ಜವಾಬ್ದಾರಿಯನ್ನು ರೋಹಿತ್ ಶರ್ಮಾಗೆ ನೀಡಿದರೆ ಆತ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಾನೆ. ಧೋನಿ ನಿವೃತ್ತಿಯ ಬಳಿಕ ಟೆಸ್ಟ್ ತಂಡದ ನಾಯಕತ್ವವನ್ನು ಕೊಹ್ಲಿ ನೀಡಲಾಗಿತ್ತು. ಬಳಿಕ ಸಿಮೀತ ಓವರ್ ಗಳ ನಾಯಕತ್ವವನ್ನು ಅವರಿಗೆ ವಹಿಸಲಾಯಿತು. ಸದ್ಯ ಟೀಂ ಇಂಡಿಯಾಗೆ ನಾಯಕತ್ವ ವಿಭಜನೆ ಮಾದರಿಯನ್ನು ಪರಿಗಣಿಸಬೇಕಿದೆ. ಆದರೆ ನಾನು ಕೊಹ್ಲಿಯನ್ನು ಉತ್ತಮ ನಾಯಕ ಅಲ್ಲ ಎಂದು ಹೇಳುತ್ತಿಲ್ಲ. ಕೊಹ್ಲಿ, ರೋಹಿತ್ ಇಬ್ಬರೂ ಐಪಿಎಲ್‍ನಲ್ಲಿ ನಾಯಕರಾಗಿ ತಂಡಗಳನ್ನು ಮುನ್ನಡೆಸಿದ್ದು, ನನ್ನ ದೃಷ್ಟಿಯಲ್ಲಿ ರೋಹಿತ್ ತಮ್ಮ ನಾಯಕತ್ವದಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸುತ್ತಾರೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *