ರೈತ ಇದ್ರೆನೇ ದೇಶ- ಪ್ರತಿಭಟನೆಗೆ ಹ್ಯಾಟ್ರಿಕ್ ಹೀರೋ ಬೆಂಬಲ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ ಬಂದ್‍ಗೆ ರಾಜ್ಯಾದ ಹಲವೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್‍ವುಡ್ ಹ್ಯಾಟಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಬೆಂಬಲ ಸೂಚಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಶಿವಣ್ಣ, ರೈತ ದೇಶದ ಬೆನ್ನೆಲುಬು, ರೈತ ಇದ್ರೆನೇ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಬರೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಭಾರತ್ ಬಂದ್ ಕರೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಸಂಪೂರ್ಣ ಭಾರತ್ ಬಂದ್ ಆಗಿದ್ದು ನೂತನ ಕಾಯ್ದೆಗಳು ವಿರೋಧಿಸಿ ದೇಶದ್ಯಾಂತ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಕಾಯ್ದೆ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.

ಕಳೆದ ಹದಿಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದು ಈವರೆಗೂ ನಡೆದ ಐದು ಸಂಧಾನ ಸಭೆಗಳು ವಿಫಲವಾಗಿದೆ. ಸಭೆಯಲ್ಲಿ ಮೂರು ಕಾಯ್ದೆಗಳನ್ನು ವಾಪಸ್ ಪಡೆಯುವಂತೆ 40 ಕ್ಕೂ ಹೆಚ್ಚು ರೈತ ಸಂಘಟನೆಯ ಮುಖಂಡರು ಆಗ್ರಹಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಮಾತ್ರ ಕಾಯ್ದೆ ವಾಪಸ್ ಪಡೆಯಲು ಹಿಂದೆಟು ಹಾಕಿದ್ದು ಕೆಲವು ಮಾರ್ಪಡಿಗೆ ಮಾತ್ರ ಒಪ್ಪಿಕೊಂಡಿದೆ. ಸರ್ಕಾರದ ಈ ಭರವಸೆಗೆ ಬಗ್ಗದ ಹೋರಾಟಗಾರು ಭಾರತ್ ಬಂದ್ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಸಂಬಂಧ ಟ್ವೀಟ್ ಮಾಡಿ ಪ್ರತಿಕ್ಷಗಳ ವಿರುದ್ಧ ಕಿಡಿಕಾರಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಕೃಷಿ ಮಸೂದೆಗಳನ್ನು ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳನ್ನು ಸರ್ಕಾರ ಖರೀದಿಸುವ ಪ್ರಕ್ರಿಯೆ, ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಖಚಿತವಾಗಿ ಮುಂದುವರಿಯಲಿದೆ. ಜೊತೆಗೆ ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ ಮತ್ತು ಆದಾಯ ಹೆಚ್ಚಿಸಲು ನೂತನ ಕಾಯ್ದೆ ನೆರವಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಂದು ಟ್ವೀಟ್ ಮಾಡಿ, ರಾಜಕೀಯ ಅಸ್ತಿತ್ವಕ್ಕಾಗಿ ಕೇಂದ್ರ ಸರ್ಕಾರದ ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಹಿಂದೆ ಅದರ ಪರವಾಗಿದ್ದವು. ಈಗ ಮಸೂದೆ ವಿರುದ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ರೈತರಿಗೆ ಆಗುವ ಅನುಕೂಲತೆಗಳನ್ನು ತಪ್ಪಿಸಲು ನಡೆಸುತ್ತಿರುವ ವಿರೋಧವನ್ನು ಒಪ್ಪಲಾಗದು. ಇದರ ವಿರುದ್ಧ ಬಿಜೆಪಿ ಜನಜಾಗೃತಿ ನಡೆಸಲಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *