ರೈತರಿಗೆ ಸಿಎಂ ಮನೆ ಸದಾ ತೆರೆದಿರುತ್ತದೆ: ಬಿಎಸ್‍ವೈ

– ರೈತರ ಹೋರಾಟ ಅರ್ಥಹೀನ

ಬೆಂಗಳೂರು: ರೈತರ ಹೋರಾಟ ತಡೆಯುವ ಕೆಲಸ ಸರ್ಕಾರ ಮಾಡುತ್ತಿಲ್ಲ. ಟ್ಯ್ರಾಕ್ಟರ್‍ಗಳು ಬಂದರೆ ನಗರದಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತೆ. ಅಸ್ತಿತ್ವ ತೋರಿಸೋದಕ್ಕಾಗಿ ಕೆಲವರು ಹೀಗೆ ಮಾಡ್ತಿದ್ದಾರೆ. ರೈತರ ಹೋರಾಟ ಅರ್ಥಹೀನ. ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಅವಕಾಶ ನೀಡಿದೆ. ನಮ್ಮ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತೆ. ರೈತರು ಮಾತುಕತೆಗೆ ಬರಬಹುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಶ್ನೆಯೇ ಇಲ್ಲ. ಟ್ರ್ಯಾಕ್ಟರ್ ಬರೋದನ್ನು ಮಾತ್ರ ತಡೆದಿದ್ದೇವೆ. ರೈತರಿಗೆ ಸಿಎಂ ಮನೆ ಸದಾ ತೆರೆದಿರುತ್ತದೆ. ಅವರು ಯಾವಾಗ ಬೇಕಾದರೂ ಬರಬಹುದು. ಪ್ರಧಾನಿಗಳು ಎಲ್ಲಾ ರೀತಿಯಲ್ಲಿ ಯೋಚನೆ ಮಾಡಿ ಕಾಯಿದೆ ತಂದಿದ್ದಾರೆ. ಆದರೂ ಪ್ರತಿಭಟನೆ ಮಾಡೋದು ಸರಿಯಲ್ಲ. ನಾವು ಬದುಕಿದ್ದೇವೆ ಅಂತ ಹೋರಾಟ ಮಾಡೋದು ಸರಿಯಲ್ಲ ಎಂದರು.

ಯಾಕಾಗಿ ಹೋರಾಟ ಮಾಡ್ತಿದ್ದೇವೆ ಅನ್ನೋ ಬಗ್ಗೆ ರೈತರ ನಾಯಕರಿಗೆ ಗೊತ್ತಿಲ್ಲ. 2 ವರ್ಷ ಕಾಯಿದೆ ಮುಂದೂಡುವ ಬಗ್ಗೆ ಪ್ರಧಾನಿ ತೀರ್ಮಾನ ಮಾಡಿದ್ದಾರೆ. ಜನರನ್ನು ತಪ್ಪು ದಾರಿಗೆ ಎಳೆಯಬಾರದು. ಕೆಲವರು ಅಸ್ತಿತ್ವ ತೋರಿಸಲು ಮಾಡುತ್ತಿರುವ ಹೋರಾಟ ಇದು. ಇದು ರೈತರಿಗೆ ಶೋಭೆ ತರಲ್ಲ ಎಂದು ಗರಂ ಆದರು.

ಯಾವ ಪ್ರಜಾಪ್ರಭುತ್ವದ ಕಗ್ಗೊಲೆ ಕೂಡ ಮಾಡಿಲ್ಲ. ರೈತರ ಪ್ರತಿಭಟನೆ ಹತ್ತಿಕ್ಕಿಲ್ಲ. ಟ್ರ್ಯಾಕ್ಟರ್ ಗಳಿಂದ ಸಾರ್ವಜನಿಕರಿಗೆ ತೊಂದರೆ ಆಗತ್ತೆ. ಅದಕ್ಕೆ ಬೇಡ ಅಂತ ಹೇಳಿದ್ದೇವೆ. ಪ್ರತಿಭಟನೆ ಮಾಡುತ್ತಿರುವವರು ಯಾವ ಕಾರಣಕ್ಕೆ ಮಾಡ್ತಿದ್ದೀವಿ ಏನೂ ಅಂತ ಹೇಳ್ತಿಲ್ಲ. ಕೇವಲ ಜನರ ದಾರಿ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಅಷ್ಟೆ. ಯಾವತ್ತೂ ಕೂಡ ನನ್ನ ಮನೆ ಬಾಗಿಲು ತೆರೆದಿರುತ್ತದೆ. ಯಾವಾಗ ಬೇಕಾದರೂ ರೈತ ಮುಖಂಡರು ಬಂದು ಚರ್ಚೆ ಮಾಡಬಹುದು ಎಂದು ತಿಳಿಸಿದರು.

ರೈತರ ಹೋರಾಟ ಶಾಂತಿಯುತವಾಗಿ ನಡೆಯುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಅವರ ಬೇಡಿಕೆಗೆ ಈಗಾಗಲೇ ಪ್ರಧಾನಿ ಮೋದಿ ಪರಿಹಾರ ಕಂಡುಕೊಂಡಿದ್ದಾರೆ. ಹೋರಾಟದ ಸ್ಪಷ್ಟತೆ ಅವರಲ್ಲಿ ಇಲ್ಲ. ರೈತ ಮುಖಂಡರು ಬದುಕಿದ್ದೇವೆ ಅಂತ ತೋರಿಸಲು ಪ್ರತಿಭಟನೆ ಮಾಡ್ತಿದ್ದಾರೆ. ಸತ್ಯಾಂಶ ತಿಳಿಯದೇ ಪ್ರತಿಭಟನೆ ಮಾಡುವುದು ಸರಿಯಲ್ಲ. ರೈತರ ಸಮಸ್ಯೆ ಹೇಳಿಕೊಳ್ಳಲು ನನ್ನ ಮನೆ ಮತ್ತು ಕಚೇರಿ ಒಪನ್ ಇರುತ್ತೆ. ಸಮಸ್ಯೆ ಹೇಳಿಕೊಳ್ಳಲು, ಚರ್ಚೆಗೆ ನನ್ನ ಕಚೇರಿ ಬಾಗಿಲು ಸದಾ ಓಪನ್ ಇರುತ್ತೆ. ನಾವು ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *