ರಾಯಚೂರಿನಲ್ಲಿ ಮಳೆಯ ಅವಾಂತರ – ಮೇಲ್ಛಾವಣಿ ಕುಸಿದು ಮಹಿಳೆಗೆ ಗಂಭೀರ ಗಾಯ

– ಮನೆಗಳಿಗೆ ನುಗ್ಗಿದ ನೀರು, ಭತ್ತದ ಬೆಳೆ ಸಂಪೂರ್ಣ ಹಾನಿ
– 2 ವರ್ಷದ ಮಗು ಪ್ರಾಣಾಪಾಯದಿಂದ ಪಾರು

ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆಗೆ ಮನೆ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದಾಳೆ.

ಶಾಂತಮ್ಮ ಗಂಭೀರವಾಗಿ ಗಾಯಗೊಂಡಿರುವ ಮಹಿಳೆ. ಮೇಲ್ಚಾವಣಿ ಕುಸಿತದಿಂದ ಮಣ್ಣಲ್ಲಿ ಸಿಲುಕಿದ್ದ ಮಹಿಳೆಯನ್ನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಪಕ್ಕದಲ್ಲೇ ಮಲಗಿದ್ದ 2 ವರ್ಷದ ಮಗು ಪ್ರಾಣಾಯದಿಂದ ಪಾರಾಗಿದೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಸ್ಥಳಕ್ಕೆ ಮಸ್ಕಿ ತಹಸೀಲ್ದಾರ್ ಬಲರಾಮ್ ಕಟ್ಟೀಮನಿ ಭೇಟಿ ಪರಿಶೀಲನೆ ಮಾಡಿದ್ದಾರೆ. ಮಸ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಾಳು ಶಾಂತಮ್ಮ ಮಸ್ಕಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜೋರು ಮಳೆಯಾಗಿದೆ. ಮಸ್ಕಿ ಪಟ್ಟಣದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಪಟ್ಟಣದ ಪುಟ್ಟರಾಜ ಉದ್ಯಾನಕ್ಕೆ ನೀರು ನುಗ್ಗಿದೆ. ತಹಶೀಲ್ದಾರ್ ಕಚೇರಿಗೆ ನೀರು ಸುತ್ತುವರಿದಿರುವುದರಿಂದ ರಸ್ತೆ ಸಂಚಾರ ಬಂದ್ ಆಗಿದೆ. ಸತತ ಮಳೆಯಿಂದಾಗಿ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತು ಕೆರೆಯಂತಾಗಿವೆ. ಮಸ್ಕಿ ನಾಲೆಯಿಂದ ಹೆಚ್ಚು ಪ್ರಮಾಣ ನೀರು ಬಿಡುಗಡೆ ಮಾಡಲಾಗುತ್ತಿದ್ದು ತುಂಬಿ ಹರಿಯುತ್ತಿರುವ ಮಸ್ಕಿ ಹಳ್ಳದಿಂದ ಜಮೀನುಗಳಿಗೆ ನೀರು ನುಗ್ಗಿದೆ.

ಸಿರವಾರ ತಾಲೂಕಿನಲ್ಲೂ ಜೋರು ಮಳೆಯಾಗಿದ್ದು, ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಈ ಮೊದಲೇ ಮಳೆ ಗಾಳಿಗೆ ಭತ್ತದ ಬೆಳೆ ನೆಲಕ್ಕಚ್ಚಿತ್ತು, ಈಗ ಸಂಪೂರ್ಣ ನಷ್ಟವಾಗಿದೆ. ಇದರಿಂದ ರೈತರಿಗಿದ್ದ ಅಲ್ಪ ಸ್ವಲ್ಪ ಭರವಸೆಯೂ ಹೋಗಿದ್ದು ಈ ಭಾರೀ ಸಂಪೂರ್ಣ ಬೆಳೆಹಾನಿಯಾಗಿದೆ.

Comments

Leave a Reply

Your email address will not be published. Required fields are marked *