ರಾಯಚೂರಿನಲ್ಲಿ ಅನಾವಶ್ಯಕವಾಗಿ ಹೊರಬಂದ್ರೆ ಲಾಠಿ ಏಟು ಫಿಕ್ಸ್

ರಾಯಚೂರು: ಲಾಕ್‍ಡೌನ್ ಹಿನ್ನೆಲೆಯಲ್ಲಿ ಮನೆಯಿಂದ ಅನಾವಶ್ಯಕವಾಗಿ ಹೊರ ಬರುವವರಿಗೆ ರಾಯಚೂರಿನಲ್ಲಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

ರಾಯಚೂರು ಹಾಗೂ ಸಿಂಧನೂರು ನಗರ ಸಂಪೂರ್ಣ ಲಾಕ್‍ಡೌನ್ ಇದ್ದರೂ ಜನ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಚನೆಗಳನ್ನ ಮೀರಿ ಹೊರ ಬರುತ್ತಿದ್ದಾರೆ. ಅಗತ್ಯ ವಸ್ತುಗಳ ನೆಪದಲ್ಲಿ ಓಡಾಡುತ್ತಿರುವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

ಮಧ್ಯಾಹ್ನ ಎರಡು ಗಂಟೆವರೆಗೆ ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅವರ ಬಡವಾಣೆಗಳಲ್ಲೆ ವಸ್ತುಗಳನ್ನ ಖರೀದಿಸುವಂತೆ ಸೂಚಿಸಿದ್ದರೂ ಮುಖ್ಯರಸ್ತೆ, ಮಾರ್ಕೆಟ್ ಪ್ರದೇಶಕ್ಕೆ ಹೆಚ್ಚು ಸಂಖ್ಯೆಯಲ್ಲಿ ಜನ ಬರುತ್ತಿದ್ದಾರೆ. ಎಲ್ಲೆಡೆ ನಾಕಾ ಬಂದಿಗಳ ಮೂಲಕ ಜನರ ಓಡಾಟ ನಿಯಂತ್ರಿಸುತ್ತಿರುವ ಪೊಲೀಸರು ಕೆಲವೆಡೆ ಲಾಠಿ ರುಚಿಯನ್ನೂ ತೋರಿಸುತ್ತಿದ್ದಾರೆ. ಅಲ್ಲದೆ ಲಾಕ್‍ಡೌನ್ ಆದೇಶ ಉಲ್ಲಂಘಿಸಿ ಓಡಾಡುತ್ತಿರುವ ಆಟೋ ರಿಕ್ಷಾಗಳ ಚಾಲಕರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.

ಬೆಳಗ್ಗೆ 10 ಗಂಟೆವರೆಗೆ ಜನರ ಓಡಾಟಕ್ಕೆ ಅವಕಾಶ ಕೊಟ್ಟಿದ್ದು ನಂತರ ಲಾಕ್‍ಡೌನ್ ಇನ್ನಷ್ಟು ಬಿಗಿಗೊಳಿಸುತ್ತಿರುವ ಪೊಲೀಸರು ಅನಾವಶ್ಯಕ ವಾಗಿ ಓಡಾಡುವವರಿಗೆ ದಂಡ ಹಾಕುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *