ರಾಯಚೂರಿನಲ್ಲಿ ಅತೀ ಹೆಚ್ಚು ಮಳೆ ದಾಖಲು

-ಇನ್ನೂ 4 ದಿನ ರಾಜ್ಯದಲ್ಲಿ ಜೋರು ಮಳೆ

ರಾಯಚೂರು: ಶುಕ್ರವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ನಗರ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಕಲ್ಮಲ ಹೋಬಳಿಯಲ್ಲಿ 148.5 ಮಿ.ಮೀಟರ್ ಮಳೆಯಾಗಿದ್ದು. ರಾಜ್ಯದಲ್ಲೇ ನಿನ್ನೆ ಅತೀ ಹೆಚ್ಚು ಮಳೆ ಸುರಿದ ಪ್ರದೇಶವಾಗಿದೆ. ರಾಜ್ಯದ ಕರಾವಳಿ ಭಾಗ ಸೇರಿ ವಿವಿಧ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಕಾಲ ಗುಡುಗು, ಮಿಂಚು, ಜೋರುಗಾಳಿ ಸಹಿತ ಭಾರೀ ಮಳೆ ಬೀಳುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿದೆ.

ಮೇ 31 ರಂದು ಕರಾವಳಿ ಕರ್ನಾಟಕ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ಜೂನ್ 1 ರಂದು ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ. ಜೂನ್ 2 ರಂದು ಬಾಗಲಕೋಟೆ, ಬೆಳಗಾವಿ, ಹಾವೇರಿ, ವಿಜಯಪುರ, ಬಳ್ಳಾರಿ, ತುಮಕೂರಿನಲ್ಲೂ ಗುಡುಗು, ಮಿಂಚು ,ಗಾಳಿ ಸಹಿತ ಜೋರು ಮಳೆ ಸುರಿಯುವ ಸಂಭವವಿದೆ. ಜೂನ್ 3 ರಂದು ಸಹ ರಾಜ್ಯದ ಹಲವಡೆ ಭಾರೀ ಮಳೆ ಬೀಳಲಿದೆ ಅಂತ ಬೆಂಗಳೂರು ಹವಾಮಾನ ಕೇಂದ್ರ ಎಚ್ಚರಿಸಿದೆ.

ನಿನ್ನೆ ಸುರಿದ ಮಳೆಗೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಳ್ಳಗಳು ತುಂಬಿ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ನಗರದ ಎಲ್ ಬಿಎಸ್ ನಗರದಲ್ಲಿ ಮನೆ ಕುಸಿದಿದೆ. ನಗರದ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇನ್ನೊಂದೆಡೆ ಮುಂಗಾರು ಪೂರ್ವದಲ್ಲೇ ಜೋರು ಮಳೆ ಬಂದಿರುವುದು ರೈತರಿಗೆ ಸಂತಸ ತಂದಿದೆ.

Comments

Leave a Reply

Your email address will not be published. Required fields are marked *