ರಾಮ ಮಂದಿರ ನಿರ್ಮಾಣವಾಗುತ್ತಿದ್ದಂತೆ ಹಿರಿಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್ ಭರವಸೆ

– ರಾಮಾಯಣದಲ್ಲಿನ ರಾಮ ರಾಜ್ಯದ 10 ತತ್ವಗಳನ್ನು ಅಳವಡಿಸಿಕೊಳ್ಳಲು ಚಿಂತನೆ

ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಾವು ಮತ್ತೊಮ್ಮೆ ಹನುಮನ ಭಕ್ತರೆಂದು ಘೋಷಿಸಿದ್ದು, ಮಾತ್ರವಲ್ಲದೆ ರಾಮಾಯಣದಲ್ಲಿನ ರಾಮರಾಜ್ಯದ 10 ತತ್ವಗಳನ್ನು ದೆಹಲಿ ಸರ್ಕಾರ ಅನುಸರಿಸುತ್ತದೆ ಎಂದು ಹೇಳಿದ್ದಾರೆ.

ದೆಹಲಿ ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ಮಹತ್ವದ ಘೋಷಣೆ ಮಾಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ಹಿರಿಯರನ್ನು ಅಯೋಧ್ಯೆಯ ಶ್ರೀರಾಮನ ದರ್ಶನಕ್ಕೆ ಸರ್ಕಾರದಿಂದಲೇ ಕಳುಹಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಶ್ರೀ ರಾಮ ಭಕ್ತ ಹನುಮಂತನ ಭಕ್ತ ನಾನು. ಹೀಗಾಗಿ ಇಬ್ಬರಿಗೂ ಭಕ್ತನೇ, ಶ್ರೀ ರಾಮ ಅಯೋಧ್ಯೆಯ ರಾಜನಾಗಿದ್ದ. ಅವನ ಆಡಳಿತದಲ್ಲಿ ಎಲ್ಲವೂ ಚೆನ್ನಾಗಿತ್ತು. ಅಲ್ಲಿ ದುಃಖವೇ ಇರಲಿಲ್ಲ. ಪ್ರತಿಯೊಂದು ಸೌಲಭ್ಯವೂ ಇತ್ತು. ಹೀಗಾಗಿಯೇ ಅದನ್ನು ರಾಮ ರಾಜ್ಯ ಎಂದು ಕರೆಯಲಾಯಿತು. ಇಂದು ಅದೊಂದು ಪರಿಕಲ್ಪನೆಯಾಗಿದೆ ಎಂದರು.

ರಾಮ ರಾಜ್ಯದ ಪರಿಕಲ್ಪನೆಯಿಂದ ಪ್ರೇರಿತರಾಗಿ ದೆಹಲಿಯ ಜನರ ಸೇವೆ ಮಾಡಲು 10 ತತ್ವಗಳನ್ನು ಅಳವಡಿಸಿಕೊಂಡಿದ್ದೇವೆ. ಈ 10 ತತ್ವಗಳು ಆಹಾರ, ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು ಸರಬರಾಜು, ಉದ್ಯೋಗ, ವಸತಿ, ಮಹಿಳೆಯರಿಗೆ ಭದ್ರತೆ, ಹಿರಿಯರಿಗೆ ಗೌರವ ನೀಡುವುದು ಸೇರಿದಂತೆ ಹಲವು ತತ್ವಗಳನ್ನು ಅಳವಡಿಸಿಕೊಂಡಿದ್ದೇವೆ.

ದೆಹಲಿಯಲ್ಲಿ ಯಾರೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು, ಯಾವುದೇ ಸಾಮಾಜಿಕ ಅಂತರವಿಲ್ಲದೆ, ಪ್ರತಿ ಮಗು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಅಲ್ಲದೆ ಬಡವ, ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರಿಗೂ ಅಗತ್ಯ ವೈದ್ಯಕೀಯ ಸೌಲಭ್ಯ ಸಿಗುವಂತಾಗಬೇಕು. ಹೀಗಾಗಿ ನಾವು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮೊಹಲ್ಲಾ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿ ಶಾಸಕರಿಗೂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದು, ಆಸ್ಪತ್ರೆಗೆ ತೆರಳಿ, ಸರತಿಯಲ್ಲಿ ನಿಂತು ಸಾಮಾನ್ಯ ಜನರಂತೆ ಕೊರೊನಾ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *