ರಾಮ ಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ ದೇಣಿಗೆ ನೀಡಿದ ಅಮರಸಿಂಹ ಪಾಟೀಲ

ಚಿಕ್ಕೋಡಿ: ಐತಿಹಾಸಿಕ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಮಾಜಿ ಸಂಸದ ಅಮರಸಿಂಹ ಪಾಟೀಲ ಅವರು 10 ಲಕ್ಷ ರೂ ದೇಣಿಗೆ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ಆಯೋಜಿಸಿದ್ದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ ಹಾಗೂ ಅವರ ಕುಟುಂಬ 10 ಲಕ್ಷ ರೂ. ಗಳ ದೇಣಿಗೆಯನ್ನು ಆರ್‍ಎಸ್‍ಎಸ್ ಪ್ರಮುಖರಿಗೆ ಹಸ್ತಾಂತರಿಸಿದರು. ಅಲ್ಲದೆ ರಾಯಬಾಗ ತಾಲೂಕಿನ ಶಿಕ್ಷಣ ಪ್ರಸಾರಕ ಮಂಡಳ ಸಂಸ್ಥೆ ವತಿಯಿಂದ ಸಂಗ್ರಹಿಸಿದ್ದ ದೇಣಿಗೆಯನ್ನೂ ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು.

ಈ ವೇಳೆ ಮಾತನಾಡಿದ ವಿಶ್ಚ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಮಹಾಮಂತ್ರಿ ಕೇಶವ ಹೆಗಡೆಯವರು, ಶ್ರೀ ರಾಮ ಮಂದಿರ ನಿರ್ಮಾಣ ವಿಶ್ವಕ್ಕೆ ಮಾದರಿಯಾಗಲಿದೆ. ಭವ್ಯವಾಗಿ ಮಂದಿರ ನಿರ್ಮಾಣವಾಗಲಿದ್ದು ರಾಮ ಕಥಾ ಪಾರ್ಕ್, ರಾಮಾಯಣ ಕಥೆಯ ಪ್ರದರ್ಶನಕ್ಕಾಗಿ ಥೇಟರ್‍ಗಳ ನಿರ್ಮಾಣವಾಗಲಿದೆ. 2023 ರಲ್ಲಿ ಭವ್ಯ ರಾಮ ಮಂದಿರ ಉದ್ಘಾಟನೆ ಆಗುವುದು ನಿಶ್ಚಿತ ಎಂದರು.

ಆರ್ ಎಸ್ ಎಸ್ ಪ್ರಮುಖ ಅರವಿಂದ ದೇಶಪಾಂಡೆ ಅವರು, ಅದಾನಿ, ಅಂಬಾನಿ ಮಂದಿರ ಆಗಬಾರದು ಎನ್ನುವ ಕಾರಣಕ್ಕೆ ಮನೆ ಮನೆಯಿಂದ ದುಡ್ಡು ಸಂಗ್ರಹಿಸಿ ರಾಮಮಂದಿರವನ್ನು ರಾಷ್ಟ್ರ ಮಂದಿರವಾಗಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಆರ್‍ಎಸ್‍ಎಸ್ ಪ್ರಮುಖ ಸಂಜೀವ ಅಡಿಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *