ರಾತ್ರೋ ರಾತ್ರಿ ವಕೀಲರ ಮೊರೆ ಹೋದ ದಿಗಂತ್- ಐಂದ್ರಿತಾ!

ಬೆಂಗಳೂರು: ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನೆಲೆ ಸ್ಟಾರ್ ದಂಪತಿ ದಿಗಂತ್ ಮತ್ತು ಐಂದ್ರಿತಾ ರೇ ವಕೀಲರನ್ನ ಭೇಟಿಯಾಗಿ ಸಲಹೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಡರಾತ್ರಿ ವಕೀಲರನ್ನು ಸಂಪರ್ಕಿಸಿರುವ ಮನಸಾರೆ ಜೋಡಿ, ವಿಚಾರಣೆಯನ್ನ ಹೇಗೆ ಎದುರಿಸಬೇಕು? ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೇಳುವ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದಾರೆ. ಹಾಗೇ ಕಾನೂನಿನಲ್ಲಿರುವ ಅವಕಾಶಗಳು ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇವೆ ಎಂದು ದಿಗಂತ್ ಮತ್ತು ಐಂದ್ರಿತಾ ಸ್ಪಷ್ಟನೆ ನೀಡಿದ್ದು, ತಾವು ಎಲ್ಲಿದ್ದೀವಿ ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇತ್ತ ದಿಗಂತ್ ತಾಯಿ, ಮಗ ಹಾಗೂ ಸೊಸೆ ಕೇರಳಕ್ಕೆ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಇಂದು ಬೆಳಗ್ಗೆ 11 ಗಂಟೆಗೆ ಸ್ಟಾರ್ ಜೋಡಿ ವಿಚಾರಣೆಗೆ ಆಗಮಿಸುವ ಹಿನ್ನೆಲೆ ಸಿಸಿಬಿ ಕಚೇರಿ ಸುತ್ತಮುತ್ತ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗಿದೆ. ಕಾಟನ್ ಪೇಟೆ ಪೊಲೀಸರ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದ್ದು, ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ನಾನೊಬ್ಬಳೇ ಅಲ್ಲ ಐಂದ್ರಿತಾ ಕೂಡ ಹೋಗಿ ಬರುತ್ತಿದ್ದಳು

ಸಂಜನಾ-ರಾಗಿಣಿಗೆ ಮುನ್ನವೇ ನಟ ದಿಗಂತ್ ಹೆಸರು ಕೇಳಿಬಂದಿತ್ತು. ಆರಂಭದಲ್ಲೇ ನಟ ದಿಗಂತ್‍ರನ್ನು ಎನ್‍ಸಿಬಿ ವಿಚಾರಣೆಗೆ ಒಳಪಡಿಸಿತ್ತು ಎನ್ನಲಾಗಿತ್ತು. ಮೂರು ದಿನಗಳ ಹಿಂದಷ್ಟೇ ನಟಿ ಶೇಖ್ ಫಾಝಿಲ್, ರಾಹುಲ್ ಶೆಟ್ಟಿ ಜೊತೆ ಐಂದ್ರಿತಾ ರೇ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. 2018ರಲ್ಲಿ ಎರಡು ಬಾರಿ ಶ್ರೀಲಂಕಾದ ಕೊಲಂಬೋದಲ್ಲಿರುವ ಬ್ಯಾಲೆ ಕ್ಯಾಸಿನೋಗೆ ನಟಿ ಐಂದ್ರಿತಾ ರೇ ಹೋಗಿ ಬಂದಿದ್ದರು. ಹಬ್ಬಕ್ಕೆ ನಾನು ಹೋಗ್ತಿದ್ದೀ, ನೀವು ಬನ್ನಿ. ನನಗೆ ಆಹ್ವಾನ ನೀಡಿರೋ ಶೇಖ್ ಫಾಝಿಲ್‍ಗೆ ಧನ್ಯವಾದ ಎಂದಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದ ನಟಿ ಐಂದ್ರಿತಾ ರೇ, ಸಿನಿಮಾ ಪ್ರಮೋಷನ್‍ಗಾಗಿ ಆ ಕ್ಯಾಸಿನೋಗೆ ಹೋಗಿದ್ದೇ ಅಷ್ಟೇ. ನನಗೂ ಫಾಝಿಲ್‍ಗೂ ಯಾವುದೇ ಸಂಬಂಧ ಇಲ್ಲ. ಅವರೇನು ಅಂತಾ ಈಗಷ್ಟೇ ಗೊತ್ತಾಗಿದೆ. ನನಗೂ ಡ್ರಗ್ಸ್ ಕೇಸ್‍ಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶೇಖ್ ಫಾಝಿಲ್ ನನಗೆ ಪರಿಚಯವಿಲ್ಲ: ಐಂದ್ರಿತಾ ರೇ

Comments

Leave a Reply

Your email address will not be published. Required fields are marked *