ರಾತ್ರಿ ಇದ್ದಕ್ಕಿದ್ದಂತೆ ಬಡಿದುಕೊಂಡ ಶಾಲೆಯ ಬಾಗಿಲು- ಭೂತ ಅಂತ ಸ್ಥಳಕ್ಕೆ ಬಂದ ಜನ, ಪೊಲೀಸ್ರಿಗೂ ಶಾಕ್

ಕಾರವಾರ: ಬೀಗ ಹಾಕಿದ್ದ ಶಾಲೆಯ ಬಾಗಿಲು ರಾತ್ರಿ ಇದ್ದಕ್ಕಿದ್ದಂತೆ ಬಡಿದುಕೊಳ್ಳುತ್ತಿತ್ತು. ಈ ವಿಚಾರ ಮನಗಂಡ ಕೂಡಲೇ ಭೂತವೆಂದು ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಹಾಗೂ ಪೊಲೀಸರು ತಬ್ಬಿಬ್ಬಾಗಿದ್ದಾರೆ.

ಹೌದು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶಿವಾಜಿ ಶಾಲೆಗೆ ಬೀಗ ಹಾಕಲಾಗಿತ್ತು. ಇಡೀ ಆವರಣದಲ್ಲಿ ಜನರ ಸದ್ದಿಲ್ಲದೆ ಕತ್ತಲು ಕವಿದಿತ್ತು. ಈ ಮಧ್ಯೆ ಕತ್ತಲಲ್ಲಿ ಬೀಗ ಹಾಕಿದ್ದ ಶಾಲೆಯ ಬಾಗಿಲು ಒಂದೇ ಸಮನೆ ಗಾಳಿಯ ಶಬ್ದವಿಲ್ಲದೇ ಬಡಿದುಕೊಂಡಿತ್ತು. ಬಾಗಿಲು ಶಬ್ದದ ರಭಸಕ್ಕೆ ಅಕ್ಕ ಪಕ್ಕದವರು ಬಂದು ಏನಾಯ್ತು ಎಂದು ಕೈಯಲ್ಲಿ ಟಾರ್ಚ್ ಹಿಡಿದು ನೋಡಿದ್ದಾರೆ. ಬಾಗಿಲು ಒಂದೇ ಸಮನೆ ಬಡಿದುಕೊಳ್ಳುತ್ತಿದ್ದುದನ್ನು ನೋಡಿದ ಸ್ಥಳೀಯರು, ಒಳಗೆ ಯಾರಿದ್ದೀರಿ ಎಂದು ಕೇಳಿದ್ದಾರೆ. ಆದರೆ ಒಳಗಿಂದ ಯಾವ ಧ್ವನಿಯೂ ಬಾರದಿರುವಾಗ ಕಿಟಕಿಯಲ್ಲಿ ಇಣಕಿ ನೋಡಿದ್ದಾರೆ.

ಕಿಟಕಿ ಮೂಲಕ ನೋಡಿದಾಗಲೂ ಯಾರು ಕಾಣಿಸಲಿಲ್ಲ. ಹೀಗಾಗಿ ಭೂತವಿರಬೇಕು ಎಂದು ಹೆದರಿದ ಜನ ಅಲ್ಲಿಂದ ದೂರ ಸರಿದಿದ್ದಾರೆ. ಈ ವಿಷಯ ಸುತ್ತಮುತ್ತ ಇದ್ದ ಮನೆಗಳಿಗೆ ತಲುಪಿ ಜನ ಸೇರಿದ್ರು. ಕೊನೆಗೆ ಪೊಲೀಸರು ಸಹ ಬಂದು ನೋಡಿದಾಗಲೂ ಒಳಗಿಂದ ಯಾವುದೇ ಧ್ವನಿ ಬಾರದಿದ್ದಾಗ ಶಾಲೆಗೆ ಬೀಗ ತೆರೆಯಿಸಿ ನೋಡಿದ್ದಾರೆ. ಈ ವೇಳೆ ಪೊಲೀಸರು ಸಹ ಶಾಕ್ ಆಗಿದ್ದಾರೆ.

ಶಾಲೆಯ ಬಾಗಿಲು ಹಾಕಿದ್ದಾಗ ಹೇಗೂ ಏನೋ ಬೀದಿ ನಾಯಿಯೊಂದು ಕೊಠಡಿಯ ಒಳಕ್ಕೆ ಸೇರಿಕೊಂಡು ಬಿಟ್ಟಿತ್ತು. ಇಡೀ ದಿನ ಅಲ್ಲಿಯೇ ಇದ್ದ ಈ ನಾಯಿ ಹೊರಹೋಗಲು ಒಳಗಿನಿಂದ ಬಾಗಿಲನ್ನು ಕೆರೆದಿದೆ. ಈ ಶಬ್ದಕ್ಕೆ ಜನ ನೋಡಿ ಭೂತದ ಚೇಷ್ಟೆಯೆಂದು ಹೆದರಿ ಕಂಗಾಲಾಗಿದ್ದರು. ನಂತರ ಕೊಠಡಿಯ ಒಳಗಿಂದ ನಾಯಿ ಹೊರಬರುತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *