ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತತ್ವಪದ ಗಾಯಕ ದಾದಾಪೀರ್ ಮಂಜರ್ಲಾಗೆ ಅನಾರೋಗ್ಯ

– ಚಿಕಿತ್ಸೆ ವೆಚ್ಚಕ್ಕಾಗಿ ಹಿರಿಯ ಕಲಾವಿದನಿಂದ ಸಹಾಯಕ್ಕೆ ಮನವಿ

ರಾಯಚೂರು: ಜಿಲ್ಲೆಯ ಹಿರಿಯ ಕಲಾವಿದ, ರಾಜ್ಯೊತ್ಸವ ಪ್ರಶಸ್ತಿ ಪುರಸ್ಕ್ರತ, ತತ್ವಪದ ಸಂಗೀತ ಗಾಯಕ ದಾದಾಪೀರ್ ಮಂಜರ್ಲಾ ತೀರ್ವ ಅನಾರೋಗ್ಯದಿಂದ ಬಳಲುತ್ತಿದ್ದು ಸಹಾಯಕ್ಕಾಗಿ ಕೈಚಾಚಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ದಾದಾಪೀರ್ ಚಿಕಿತ್ಸೆಗೆ ಅಗತ್ಯವಾದ ಹಣದ ತೊಂದರೆಯಲ್ಲಿದ್ದಾರೆ. ಆರ್ಥಿಕವಾಗಿ ಸದೃಢರಲ್ಲದ ದಾದಾಪೀರ್ ಸಂಗೀತ ಸೇವೆಗೆ ತಮ್ಮ ಜೀವನ ಮುಡುಪಿಟ್ಟವರು. ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲದಿನಗಳಿಂದ ಆಸ್ಪತ್ರೆಯಲ್ಲೆ ಚಿಕಿತ್ಸೆಪಡೆಯುತ್ತಿರುವ ಹಿರಿಯ ಕಲಾವಿದನಿಗೆ ಸಹಾಯ ಬೇಕಿದೆ.

ಜಿಲ್ಲೆಯ ಕಲಾವಿದರು, ಅಭಿಮಾನಿಗಳು ಸಹಾಯ ಮಾಡಿದರೆ ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದು ಕಲಾವಿದ ಹಾಗೂ ಕಲಾವಿದನ ಕುಟುಂಬ ಕೇಳಿಕೊಂಡಿದೆ. ತಮ್ಮ ಕಲೆಯ ಮೂಲಕ ಕಲಾರಸಿಕರನ್ನ ರಂಜಿಸಿದ್ದ ಹಿರಿಯ ಕಲಾವಿದ ತತ್ವಪದಗಳ ಗಾಯನ ಮೂಲಕ ಮನೆ ಮಾತಾಗಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ದಾದಾಪೀರ್ ಮಂಜರ್ಲಾಗೆ ಅಭಿಮಾನಿ ಬಳಗವಿದೆ. ಕಷ್ಟಕಾಲದಲ್ಲಿರುವ ಗಾಯಕನಿಗೆ ಇತರ ಕಲಾವಿದರು, ಅಭಿಮಾನಿಗಳು ಹಾಗೂ ಮುಖ್ಯವಾಗಿ ಸರ್ಕಾರ ಸಹಾಯ ಮಾಡಬೇಕಿದೆ.

Comments

Leave a Reply

Your email address will not be published. Required fields are marked *