ರಾಜ್ಯದ ಇತಿಹಾಸದಲ್ಲೇ ಫಸ್ಟ್- 4 ಕೋಟಿ ಮೌಲ್ಯದ ಹಸಿ ಗಾಂಜಾ ಬೇಟೆ

-4 ಎಕರೆ 20 ಗುಂಟೆ ನೀರಾವರಿ ಜಮೀನಿನಲ್ಲಿ ಗಾಂಜಾ ಗಿಡ

ಚಿತ್ರದುರ್ಗ: ರಾಜ್ಯದಾದ್ಯಂತ ಪೊಲೀಸರು ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದು, ಪ್ರತಿದಿನ ಗಾಂಜಾವನ್ನು ವಶಕ್ಕೆ ಪಡೆದ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸದ್ಯ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಬರೋಬ್ಬರಿ ನಾಲ್ಕು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ.

ಡಿ.ಬಿ.ಮಂಜುನಾಥ್, ವೈ.ಜಂಬುನಾಥ್, ಡಿ.ವೈ.ಮಂಜುನಾಥ್, ಸುಮಂತ್ ಗೌಡ ಬಂಧಿತ ಆರೋಪಿಗಳಿದ್ದಾರೆ. ಸೆ.3ರ ನಸುಕಿನ ಜಾವ ಬೀಟ್ ಹೊರಟ ಕೋಟೆನಾಡಿನ ಪೊಲೀಸ್ ಪೇದೆಗೆ ಒಂದು ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ಮರುದಿನ ಬೆಳಗ್ಗೆಯೇ ಭರ್ಜರಿ ಶಿಕಾರಿಗೆ ಪೊಲೀಸರು ಅಖಾಡ ರೆಡಿ ಮಾಡಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ದೊಡ್ಡ ಗಾಂಜಾ ದಂಧೆಯನ್ನು ಬಯಲಿಗೆಳೆದಿದ್ದಾರೆ.

ಆಂಧ್ರ ಗಡಿಭಾಗದಲ್ಲಿ ಬಳ್ಳಾರಿಯಿಂದ ಬಂದಿದ್ದ ಆರೋಪಿಗಳು ವಡೇರಹಳ್ಳಿಯಲ್ಲಿ ಬರೋಬ್ಬರಿ 4 ಎಕರೆ 20 ಗುಂಟೆ ಜಮೀನಿನಲ್ಲಿ ಗಾಂಜಾ ಬೆಳೆದಿದ್ದರು. ಹೊಲದ ಮೇಲೆ ದಾಳಿ ಮಾಡಿದ ಪೊಲೀಸರು ನಾಲ್ವರು ಆರೋಪಿಗಳನ್ನು ಸೆ.4 ರಂದು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ದಾಳಿ ಮಾಡಿದ ಜಮೀನಿನಲ್ಲಿ ಬರೋಬ್ಬರಿ 9,871 ಕೆ.ಜಿ ತೂಕದ ಗಾಂಜಾ ಪತ್ತೆಯಾಗಿದೆ. ಈ ದಿಸೆಯಲ್ಲಿ ನೋಡಿರೆ ರಾಜ್ಯದ ಅತಿದೊಡ್ಡ ಗಾಂಜಾ ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ದಾಖಲಾದಂತಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ನಡೆದಿದ್ದ ಗಾಂಜಾ ವಹಿವಾಟಿನಲ್ಲಿ ವಿದ್ಯಾರ್ಥಿಗಳು ಕೂಡ ಅಮಲೇರಿಸಿಕೊಳ್ತಿದ್ದ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಪೊಲೀಸರು ವಶಕ್ಕೆ ಪಡೆದ ಗಾಂಜಾದ ಬೆಲೆ ಬರೋಬ್ಬರಿ ನಾಲ್ಕು ಕೋಟಿ ರೂ. ಅಧಿಕ ಎಂದು ಅಂದಾಜು ಮಾಡಲಾಗಿದೆ. 4 ಎಕರೆ 20 ಗುಂಟೆ ಜಮೀನಿನಲ್ಲಿ ಪಕ್ಕ ಪ್ಲಾನ್ ಮಾಡಿ ಬಳ್ಳಾರಿ ಮೂಲದ ರುದ್ರೇಶ್ ಅಕ್ರಮವಾಗಿ ಗಾಂಜಾ ಬೆಳೆದಿದ್ದ. ಈತ ಮಧ್ಯವರ್ತಿ ಸುಮಂತ್ ಗೌಡನಿಂದ ಜಮೀನು ಪಡೆದಿದ್ದ, ರುದ್ರೇಶ್ ಹಾಗೂ ಆತನ ಸಂಗಡಿಗರಾದ ಡಿ.ಬಿ.ಮಂಜುನಾಥ್, ಶಿಕ್ಷಕ ವೈ.ಜಂಬುನಾಥ್, ಡಿ.ವೈ.ಮಂಜುನಾಥ್ ವಡೇರಹಳ್ಳಿ ಗ್ರಾಮಸ್ಥರನ್ನು ಯಾಮಾರಿಸಿ ಗಾಂಜಾ ಬೆಳೆದಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರುದ್ರೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗೆ ಬಲೆ ಬೀಸಿದ್ದಾರೆ. ಆದರೆ ಈ ವೇಳೆ ಕಿಡಿಗೇಡಿಗಳು ಬೆಳೆದ ಗಾಂಜಾ ತೂಕದ ಲೆಕ್ಕಹಾಕಲು ಪೊಲೀಸರು ತೆಗೆದುಕೊಂಡ ಸಮಯವು ದಾಖಲೆಯಾಗಿದ್ದೂ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದ ಪೊಲೀಸರು ಬರೋಬ್ಬರಿ 9 ದಿವಸಗಳ ಕಾಲ ತೂಕ ಮಾಡಿದ್ದಾರೆ. ರಾಜ್ಯದಲ್ಲೇ ಅತಿ ದೊಡ್ಡ ಗಾಂಜಾ ಪ್ರಕರಣವನ್ನು ಬೇಧಿಸಿ ಚಿತ್ರದುರ್ಗ ಪೊಲೀಸರು ಸೈ ಎನಿಸಿಕೊಂಡಿದ್ದಾರೆ. ಆದರೆ ದೊಡ್ಡ ಅಕ್ರಮ ಬಯಲಾದ ಬೆನ್ನಲ್ಲೇ ಕೋಟೆನಾಟಿನ ಜನರು ಸಹ ಬಾರಿ ಆತಂಕಕ್ಕೀಡಾಗಿದ್ದಾರೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿದ ಪೊಲೀಸರು ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿತ್ತು. ಬೆಳದ ಗಾಂಜಾವನ್ನು ಹೇಗೆ, ಯಾರಿಗೆ ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಂಧೆಯನ್ನು ಬೇರು ಸಮೇತ ಕಿತ್ತೆಸೆಯಲು ಕಾರ್ಯಾಚರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *