ರಾಜ್ಯದಲ್ಲಿ 308 ಮಂದಿಗೆ ಕೊರೊನಾ- ಮೂರು ಸಾವು

-ಕಲಬುರಗಿ 67, ಬೆಂಗಳೂರಿನಲ್ಲಿ 31 ಪ್ರಕರಣಗಳು
-ಸೋಂಕಿತರ ಸಂಖ್ಯೆ 6,824ಕ್ಕೇರಿಕೆ

ಬೆಂಗಳೂರು: ಇಂದು 308 ಮಂದಿಗೆ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,824ಕ್ಕೇರಿಕೆಯಾಗಿದೆ. ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಕಲಬುರಗಿಯಲ್ಲಿ 67 ಮತ್ತು ಯಾದಗಿರಿಯಲ್ಲಿ 52 ಪ್ರಕರಣಗಳು ಬೆಳಕಿಗೆ ಬಂದಿವೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಬುಲೆಟಿನ್ ಪ್ರಕಾರ, ಇಂದು ಕಂಡು ಬಂದ 308 ಸೋಂಕಿತರ ಪೈಕಿ 208 ಜನರು ಅಂತರಾಜ್ಯ ಮತ್ತು 25 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿದ್ದಾರೆ. ಇವತ್ತು ಹೆಮ್ಮಾರಿ ಕೊರೊನಾ ಮೂವರನ್ನು ಬಲಿ ಪಡೆದುಕೊಂಡಿದೆ. 6824 ಪ್ರಕರಣಗಳಲ್ಲಿ 3092 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 3648 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಜಿಲ್ಲಾವಾರು ಸೋಂಕಿತರ ಸಂಖ್ಯೆ:
ಕಲಬುರಗಿ 67, ಯಾದಗಿರಿ 52, ಬೀದರ್ 42, ಬೆಂಗಳೂರು ನಗರ 31, ದಕ್ಷಿಣ ಕನ್ನಡ 30, ಧಾರವಾಡ 20, ಉಡುಪಿ 14, ಹಾಸನ 11, ಬಳ್ಳಾರಿ 11, ವಿಜಯಪುರ 6, ರಾಯಚೂರು 5, ಉತ್ತರ ಕನ್ನಡ 5, ಕೋಲಾರ 4, ದಾವಣಗೆರೆ 3, ಮಂಡ್ಯ 2 ಮತ್ತು ಮೈಸೂರು, ಬಾಗಲಕೋಟೆ, ರಾಮನಗರದಲ್ಲಿ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿವೆ.

ಮೂವರ ಸಾವು:
1. ರೋಗಿ 6258: ಧಾರವಾಡ ಜಿಲ್ಲೆಯ 70 ವರ್ಷದ ವೃದ್ಧ ಉಸಿರಾಟದ ತೊಂದರೆಯಿಂದ ಜೂನ್ 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12ರಂದು ನಿಧನ ಹೊಂದಿದ್ದಾರೆ.

2. ರೋಗಿ 6375: ಬೆಂಗಳೂರಿನ 23 ವರ್ಷದ ಯುವಕ ಮಧುಮೇಹ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ ಜೂನ್ 9ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12ರಂದು ನಿಧನ ಹೊಂದಿದ್ದಾರೆ.

3. ರೋಗಿ 6557: ಬೆಂಗಳೂರಿನ 62 ವರ್ಷದ ಪುರುಷ ಅಸ್ತಮಾದಿಂದ ಬಳಲುತ್ತಿದ್ದರು. ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *