ರಾಜ್ಯದಲ್ಲಿ 10 ದಿನ ಲಾಕ್‍ಡೌನ್ ಪಕ್ಕಾ?

– 2 ದಿನಗಳಲ್ಲಿ ನಿರ್ಧಾರ ಸಾಧ್ಯತೆ
– ಇಂದು ಸಿಎಂ ನೇತೃತ್ವದಲ್ಲಿ ಸಭೆ

ಬೆಂಗಳೂರು: ಜನತಾ ಕರ್ಫ್ಯೂ ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಮಾಡುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಇಂದು ಸಚಿವರು, ಅಧಿಕಾರಿಗಳ ಜೊತೆ ಸಿಎಂ ಮಹತ್ವದ ಸಭೆ ನಡೆಸಲಿದ್ದಾರೆ.

ಗುರುವಾರ ಕೇರಳ ಮತ್ತು ರಾಜಸ್ಥಾನದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಘೋಷಣೆಯಾಗಿದೆ. ಬಹುತೇಕ ರಾಜ್ಯಗಳು ಲಾಕ್‍ಡೌನ್ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಮೇ 12ರಿಂದ 10 ದಿನ ಕಂಪ್ಲೀಟ್ ಲಾಕ್‍ಡೌನ್ ಮಾಡಿ ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಲಾಕ್‍ಡೌನ್ ಯಾಕೆ?
ಲಾಕ್‍ಡೌನ್ ಮಾಡದೇ ಇದ್ದರೆ ಮುಂದೆ ಬಹಳ ಕಷ್ಟವಿದೆ ಎಂದು ಈಗಾಗಲೇ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಪಕ್ಷ, ಆಡಳಿತ ಪಕ್ಷದ ಶಾಸಕರ ಜೊತೆ ಕೇಂದ್ರ ಮಂತ್ರಿಗಳು ಸಹ ಲಾಕ್‍ಡೌನ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಸೋಂಕು ನಿಯಂತ್ರಣವಾಗುತ್ತದೆ ಎಂದಾದರೆ ಲಾಕ್‍ಡೌನ್ ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಸಲಹೆ ನೀಡಿದೆ. ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳಲ್ಲೂ ಸಹ ಸೋಂಕು ದಿನೇ ದಿನೇ ಹೆಚ್ಚಾಗುತ್ತದೆ. ಹೀಗಾಗಿ ಲಾಕ್‍ಡೌನ್ ಮಾಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ.

 

ಕಂಪ್ಲೀಟ್ ಲಾಕ್‍ಡೌನ್ ಹೇಗಿರುತ್ತೆ?
ಅವಶ್ಯಕ, ತುರ್ತು ಸೇವೆ, ಸಂಚಾರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ದಿನಸಿ, ಹಾಲು, ತರಕಾರಿ ಖರೀದಿಗೆ ಮಾತ್ರ ಸಮಯ ನಿಗದಿ ಮಾಡಿ ಅನುಮತಿ ನೀಡಲಾಗುತ್ತದೆ. ಅಂತರ್ ಜಿಲ್ಲಾ, ಅಂತಾರಾಜ್ಯ ಸಂಚಾರ ಸಂಪೂರ್ಣ ಬಂದ್ ಆಗಲಿದ್ದು, ಕೋವಿಡ್ ಸಂಬಂಧಿತ ಸರ್ಕಾರಿ ಇಲಾಖೆ, ಕಚೇರಿ-ಸಂಸ್ಥೆಗಳು ಬಿಟ್ಟು ಉಳಿದ ಎಲ್ಲ ಕಚೇರಿಗಳು ಬಂದ್ ಆಗಲಿದೆ.

ಜಿಲ್ಲೆ, ರಾಜ್ಯಗಳ ಗಡಿ ಭಾಗಗಳಲ್ಲಿ ಬಿಗಿ ನಿರ್ಬಂಧ ಹೇರಲಾಗುತ್ತದೆ. ಮೈಕ್ರೋ ಕಂಟೈನ್ಮೆಂಟ್ ವ್ಯವಸ್ಥೆ ಮತ್ತಷ್ಟು ಬಿಗಿಯಾಗಿ ರಸ್ತೆ, ಗಲ್ಲಿಗಳಲ್ಲಿ ಬ್ಯಾರಿಕೇಡ್, ಪೊಲೀಸ್ ಕಾವಲು ಬಿಗಿಯಾಗಲಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಕೇಸ್ ಹಾಕಲಾಗುತ್ತದೆ. ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕಡ್ಡಾಯ ಹೋಂ ಕ್ವಾರಂಟೈನ್‍ಗೆ ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಗಳನ್ನು ಮೊದಲು ಕೋವಿಡ್ ಕೇರ್ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಬಳಿಕ ರೋಗಿ ಸ್ಥಿತಿ ನೋಡಿ ಆಸ್ಪತ್ರೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.

Comments

Leave a Reply

Your email address will not be published. Required fields are marked *