ರಾಜ್ಯದಲ್ಲಿ ದೀಪಾವಳಿಗೆ ಪಟಾಕಿ ನಿಷೇಧ: ಸಿಎಂ

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿಯನ್ನು ನಿಷೇಧ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೀಪಾವಳಿಗೆ ಯಾವುದೇ ರೀತಿಯ ಪಟಾಕಿಗೆ ಅವಕಾಶ ಇರೋದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಪಟಾಕಿ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಟಾಕಿ ನಿಷೇಧಿಸಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಬಿಎಸ್ ವೈ ತಿಳಿಸಿದರು.

ಇದೇ ವೇಳೆ ಉಪಚುನಾವಣೆ ಫಲಿತಾಂಶ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನೂರಕ್ಕೆ ನೂರು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. ನಾನು ಹೇಳಬೇಕಾದರೆ ನೂರಾರು ಬಾರಿ ಲೆಕ್ಕಾಚಾರ ಹಾಕಿನೇ ನಾನು ಹೇಳೋದು. ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಪುಟ ವಿಸ್ತರಣೆ ವಿಚಾರದ ಬಗ್ಗೆ ಮಾತನಾಡಿ, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಫಲಿತಾಂಶ ಬಂದ ಬಳಿಕ ಫೋನ್ ಮೂಲಕ ಸಂಪರ್ಕ ಮಾಡಿ ವಿಸ್ತರಣೆ ಮಾಡಬಹುದಾ ನೋಡುತ್ತೇನೆ. ಇಲ್ಲ ಅಂದ್ರೆ 11ರಂದು ದೆಹಲಿಗೆ ಹೋಗಿ ಬರುವುದಾಗಿ ಸಿಎಂ ತಿಳಿಸಿದರು.

ಮದಲೂರು ಕೆರೆಗೆ ನೀರು ಹರಿಸುವ ವಿಚಾರ ಮಾತನಾಡಿ, 6 ತಿಂಗಳಲ್ಲ, ಮೂರೇ ತಿಂಗಳಲ್ಲಿ ನೀರು ಹರಿಸ್ತೀವಿ. ಈಗಾಗಲೇ ತುಮಕೂರು ಡಿಸಿ ಜೊತೆ ಚರ್ಚೆ ಮಾಡಿದ್ದೇನೆ. ಕೆರೆ ಕ್ಲೀನ್ ಹಾಗೂ ಕಾಲುವೆ ಮೂಲಕ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

Comments

Leave a Reply

Your email address will not be published. Required fields are marked *