ರಾಜ್ಯದಲ್ಲಿ ಕೊರೊನಾ ಸ್ಫೋಟ – ರಾಜಕಾರಣಿಗಳಿಗೆ ಹೈಕೋರ್ಟ್‌ ಚಾಟಿ

ಬೆಂಗಳೂರು: ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ‌ ಉಲ್ಲಂಘಿಸುತ್ತಿರುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಜ್ಯದಲ್ಲಿ ಕೋವಿಡ್‌ 19 ಹೆಚ್ಚಾಗುತ್ತಿದ್ದು, ಜನಪ್ರತಿನಿಧಿಗಳು ಹೆಚ್ಚು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಿಐಎಲ್‌(ಸಾರ್ವಜನಿಕಾ ಹಿತಾಸಕ್ತಿ ಅರ್ಜಿ) ಸಲ್ಲಿಕೆಯಾಗಿತ್ತು.

ಇಂದು ಈ ಅರ್ಜಿಯ ವಿಚಾರಣೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ನಡೆಯಿತು. ನಿಯಮ ಉಲ್ಲಂಘನೆ ಮಾಡುವ ರಾಜಕಾರಣಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ ಪೀಠ, ಸಾರ್ವಜನಿಕರು ವಾಟ್ಸಪ್, ದೂರವಾಣಿ ಕರೆ, ಎಸ್ ಎಂಎಸ್ ಮೂಲಕ ದೂರು ನೀಡಲು ʼಕುಂದು ಕೊರತೆ ಪರಿಹಾರʼ ಕಾರ್ಯ ತಂತ್ರವನ್ನು ರೂಪಿಸುವಂತೆ ಸರ್ಕಾರಕ್ಕೆ ಆದೇಶಿಸಿತು.

ಒಂದು ವಾರದೊಳಗೆ ಕುಂದು ಕೊರತೆ ಪರಿಹಾರ(Grievance Redress) ರೂಪಿಸಬೇಕು. ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪೊಲೀಸರು ಸಾರ್ವಜನಿಕರು ನೀಡಿದ ದೂರನ್ನು ದಾಖಲಿಸಬೇಕು. ಅಲ್ಲಿ ದಾಖಲಾಗುವ ದೂರು ಆಧರಿಸಿ ಪೋಲೀಸರು ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿತು. ಅಷ್ಟೇ ಅಲ್ಲದೇ ಈ ಆದೇಶ ಪಾಲನೆ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆ  ಹೈಕೋರ್ಟ್ ಸರ್ಕಾರಕ್ಕೆ‌ ತಾಕೀತು ಮಾಡಿದೆ.

Comments

Leave a Reply

Your email address will not be published. Required fields are marked *