ರಾಜಕೀಯದಲ್ಲಿ ಇಂಟರೆಸ್ಟ್ ಇಲ್ಲ, ಕುಟುಂಬ ಮುಖ್ಯ: ಜಾರಕಿಹೊಳಿ ವೈರಾಗ್ಯದ ಮಾತು

– ಸಿಡಿ ಯುವತಿಗೆ 5 ಕೋಟಿ ಆಫರ್

ಬೆಂಗಳೂರು: ಸಿಡಿ ಸ್ಫೋಟದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದರು.

ಸುದ್ದಿಗೋಷ್ಠಿ ಆರಂಭದಲ್ಲಿ ಭಾವುಕರಾದ ರಮೇಶ್ ಜಾರಕಿಹೊಳಿ ತಮಗೆ ನೈತಿಕವಾಗಿ ಬೆಂಬಲ ನೀಡಿದ ಎಲ್ಲ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸಿದರು. ತಮ್ಮ ಪರವಾಗಿ ಮಾತನಾಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ವಿಶೇಷವಾಗಿ ಕೃತಜ್ಞತೆ ಸಹ ಸಲ್ಲಿಸಿದರು. ಈ ವೇಳೆ ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಕುಟುಂಬಕ್ಕೆ ನನ್ನ ಮೊದಲ ಪ್ರಾಶಸ್ತ್ಯ ಎಂದು ರಾಜಕೀಯ ವೈರಾಗ್ಯದ ಮಾತುಗಳನ್ನಾಡಿದ್ರು.

ಸಿಡಿಯಲ್ಲಿರುವ ಯುವತಿಯರಿಗೆ 5 ಕೋಟಿಯ ಆಫರ್ ನೀಡಲಾಗಿದೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಓರ್ವ ಮಹಾನಾಯಕ ಮೂರು ತಿಂಗಳು ಈ ಇಲಾಖೆ ನಡೆಸಿಕೊಂಡು ಹೋಗಲ್ಲ ಅಂತ ಹೇಳಿದ್ದ. ಆದ್ರೆ ನಾನು ಒಂದು ವರ್ಷ ಜನ ಮೆಚ್ಚುವಂತಹ ಕೆಲಸಗಳನ್ನ ಮಾಡಿದ್ದೇನೆ. ಸೋದರ ಬಾಲಚಂದ್ರ ಜಾರಕಿಹೊಳಿ ಆಡಿರುವ ಪ್ರತಿ ಮಾತಿಗೂ ಬದ್ಧವಾಗಿದ್ದೇನೆ. ಇಬ್ಬರು ನಾಯಕರಿಂದ ಈ ಪಿತೂರಿ ನಡೆದಿದೆ ಎಂದು ಆರೋಪಿಸಿದರು.

ನಕಲಿ ಸಿಡಿ ಸಿದ್ಧಪಡಿಸಲು 20 ಕೋಟಿ ಖರ್ಚು ಮಾಡಲಾಗಿದೆ. ರಾಜಕೀಯ, ಮಂತ್ರಿ ಸ್ಥಾನ ಸಿಗುತ್ತೋ ಇಲ್ಲ ಅನ್ನೋದು ಬೇರೆ ಮಾತು. ನಮ್ಮದು ದೊಡ್ಡ ಮನೆತನ, ನನಗೆ ಕುಟುಂಬ ಮುಖ್ಯ. ವೀಡಿಯೋ ರಿಲೀಸ್ ಬಳಿಕ ಮರುದಿನ ಬೆಳಗ್ಗೆ 9.30ಕ್ಕೆ ನಾನೇ ರಾಜೀನಾಮೆ ನೀಡಿದ್ದೇನೆ. ನನಗೆ ಯಾವುದೇ ಹೆದರಿಕೆ ಇಲ್ಲ ಎಂದು ಹೇಳಿದರು.

ಸಿಡಿ ಷಡ್ಯಂತ್ರ ಹಿಂದಿರುವವರನ್ನು ಜೈಲಿಗೆ ಕಳುಹಿಸುತ್ತೇನೆ. ಯಶವಂತಪುರದ ಸುತ್ತಮುತ್ತ ಮತ್ತು ಹುಳಿಮಾವು ಬಳಿಯಲ್ಲಿ ಸಭೆಗಳು ನಡೆದಿವೆ. ಈ ಸಂಬಂಧ ಕಾನೂನು ಹೋರಾಟ ನಡೆಸುತ್ತೇನೆ. ಎಷ್ಟೇ ಖರ್ಚು ಆಗಲಿ, ಅವರನ್ನ ಜೈಲಿಗೆ ಕಳುಹಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರೋಧಿಗಳಿಗೆ ಚಾಲೆಂಜ್ ಹಾಕಿದ್ದಾರೆ.

ವೀಡಿಯೋ ರಿಲೀಸ್ ಮುನ್ನವೇ ಅಂದ್ರೆ 26 ಗಂಟೆ ಮೊದಲೇ ಈ ಬಗ್ಗೆ ಹೈಕಮಾಂಡ್ ನಿಂದ ಮಾಹಿತಿ ಲಭ್ಯವಾಗಿತ್ತು. ಹೈಕಮಾಂಡ್ ಮಟ್ಟದಲ್ಲಿರುವ ಆಪ್ತರು ಕಾನೂನಿನ ಕ್ರಮ ತೆಗೆದುಕೊಳ್ಳಲು ಸಲಹೆ ನೀಡಿದ್ದರು. ಬೆಳಗ್ಗೆ ಸಿಎಂ ಮತ್ತು ಗೃಹ ಸಚಿವರ ಜೊತೆ ಸಭೆ ನಡೆಸಿದ್ದೇನೆ. ನಂತರ ವಚನಾನಂದ ಸ್ವಾಮೀಜಿಗಳ ಜೊತೆ ಒಂದು ಗಂಟೆ ಸಭೆ ನಡೆಸಿದ್ದೇನೆ. ಸಂಜೆ ಆರೂವರೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿದ್ದಾಗ ವೀಡಿಯೋ ರಿಲೀಸ್ ಆಗಿರುವ ವಿಷಯ ತಿಳಿಯಿತು ಎಂದು ಹೇಳಿದರು.

Comments

Leave a Reply

Your email address will not be published. Required fields are marked *