ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲ: ದಿನೇಶ್ ಕಲ್ಲಹಳ್ಳಿ

ರಾಮನಗರ: ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಸೇರಿಕೊಳ್ಳಲ್ಲ. ಅಲ್ಲದೆ ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ.

ಸಿಡಿ ದೂರು ವಾಪಸ್ ಪಡೆದ ನಂತರ ಕನಕಪುರದ ಕಲ್ಲಹಳ್ಳಿ ನಿವಾಸದಲ್ಲಿ ಸುದ್ದಿಗಾರರಿಗೆ ಮೊದಲ ಪ್ರತಿಕ್ರಿಯೆ ನೀಡಿದ ದಿನೇಶ್, ನನ್ನ ವಕೀಲರು ಹೇಳಿದ ಬಳಿಕ ನಾನು ಠಾಣೆಗೆ ಹೋಗಿ ದೂರು ವಾಪಸ್ ಪಡೆದಿದ್ದೇನೆ. ಐದು ಪುಟಗಳ ಸುದೀರ್ಘವಾಗಿ ಪತ್ರ ಬರೆದಿದ್ದೇನೆ. ದೂರು ವಾಪಸ್ ಪಡೆಯಲು ಹಲವಾರು ಕಾರಣಗಳಿವೆ ಎಂದರು.

ವಿಚಾರಣೆಗೆ ಕರೆದರೆ ಮತ್ತೆ ಠಾಣೆಗೆ ಕಾನೂನಾತ್ಮಕವಾಗಿ ಹೋಗುತ್ತೇನೆ. ಸುಮೊಟೊ ಕೇಸ್ ದಾಖಲು ಬಗ್ಗೆ ತನಿಖಾಧಿಕಾರಿಗೆ ಬಿಟ್ಟಿದ್ದು. ಗುರುತರ ಆರೋಪಗಳಿಂದ ನಾನು ಮೊದಲು ಮುಕ್ತನಾಗಬೇಕು. ಹಲವು ಜನ ನನ್ನ ಮೇಲೆ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾರಾದರೂ ದಾಖಲೆಗಳನ್ನು ಇಟ್ಟು ಆರೋಪ ಮಾಡಿದರೆ ನಾನು ಯಾವುದೇ ಹೋರಾಟ ಮಾಡುವುದಿಲ್ಲ ಎಂದು ತಿಳಿಸಿದರು.

ಕೆಲವರು ತೆವಲಿಗೆ ಮಾತನಾಡ್ತಿದ್ದಾರೆ ಅಷ್ಟೇ, ಮಾತನಾಡೋದು ಸುಲಭ. ಆದರೆ ಮಾತಿನಂತೆ ಹೋರಾಟ ಮಾಡಲು ಕಷ್ಟ ಇದೆ. ತೆವಲಿಗೆ ಮಾತನಾಡಬಾರದು ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್‍ಡಿಕೆ ಹೆಸರು ಬಳಸದೇ ದಿನೇಶ್ ಟಾಂಗ್ ನೀಡಿದರು.

ನನ್ನ ಘನತೆಗೆ ಧಕ್ಕೆಯಾದ್ದರಿಂದ ಪ್ರಕರಣದಿಂದ ಹಿಂದೆ ಸರಿದಿದ್ದೇನೆ. ಮಾಹಿತಿಗಳನ್ನ ಮಾತ್ರ ಅಧಿಕಾರಿಗಳಿಗೆ ಕೊಟ್ಟು ಸತ್ಯ ಇದ್ರೆ ತನಿಖೆ ಮಾಡಿ ಎಂದು ಕೊಟ್ಟಿದ್ದೇನೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಹಾನಾಯಕ ಇದ್ದಾರೆ ಎಂಬ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾರು ಮಹಾ ನಾಯಕ ಎಂಬುದು ನನಗೆ ಗೊತ್ತಿಲ್ಲ ಎಂದರು.

ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನ ಜೈಲಿಗೆ ಕಳುಹಿಸುವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿ, ಕಾನೂನಾತ್ಮಕವಾಗಿ ಹೋರಾಟ ಮಾಡಲು ಎಲ್ಲರಿಗೂ ಅವಕಾಶವಿದೆ. ಅವರು ಹೋರಾಟ ಮಾಡಲಿ, ನಾನು ಕಾನೂನಾತ್ಮಕವಾಗಿ ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *