ರಾಗಿಣಿ, ಸಂಜನಾಗೆ ಬೇಲ್ ಸಿಗದಿದ್ರೆ ಕಮಿಷನರ್ ಕಚೇರಿ ಬ್ಲಾಸ್ಟ್ ಮಾಡ್ತೀವಿ- ಬೆದರಿಕೆ ಪತ್ರ

– ಬಂಡೆ ಒಡೆಯುವ ಸ್ಫೋಟಕ ರವಾನೆ
– ನ್ಯಾಯಾಧೀಶರು ಸೇರಿ ಸಿಸಿಬಿ ತನಿಖಾಧಿಕಾರಿಗಳಿಗೆ ಬೆದರಿಕೆ ಪತ್ರ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಸಿಗದಿದ್ರೆ ಕಮಿಷನರ್ ಕಚೇರಿ ಮತ್ತು ಸಿಟಿ ಸಿವಿಲ್ ಕೋರ್ಟಿಗೆ ಬೆದರಿಕೆ ಪತ್ರ ಬಂದಿದೆ. ಪತ್ರದ ಜೊತೆಗೆ ಕಮೀಷನರ್ ಕಚೇರಿಗೆ ಬಂಡೆ ಒಡೆಯುವ ಸ್ಫೋಟಕ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸ್ಯಾಂಡಲ್‍ವುಡ್ ಡ್ರಗ್ ಮಾಫಿಯಾ ಹಾಗೂ ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆಯನ್ನ ಸಿಸಿಬಿ ಪೊಲೀಸರು ದಿನಕಳದಂತೆ ಚುರುಕುಗೊಳಿಸಿದ್ದಾರೆ. ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಸುಮಾರು 370ಕ್ಕೂ ಹೆಚ್ಚು ಮಂದಿ ಬಂಧಿತರಾಗಿದ್ದಾರೆ. ಡ್ರಗ್ಸ್ ಕೇಸ್ ನಲ್ಲಿ ನಟಿ ಸಂಜನಾ, ರಾಗಿಣಿ ಸೇರಿದಂತೆ 15ಕ್ಕೂ ಅಧಿಕ ಮಂದಿ ಜೈಲು ಪಾಲಾಗಿದ್ದಾರೆ. ಇತ್ತ ಎನ್.ಡಿ.ಪಿ.ಎಸ್ ಕೋರ್ಟ್ ನಲ್ಲಿ ಜಾಮೀನು ಸಿಗದೇ ಸಂಜನಾ ಹಾಗೂ ರಾಗಿಣಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ತನಿಖೆಯಿಂದ ಹಿಂದೆ ಸರಿಯುವಂತೆ ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಹಾಗೂ ನಟಿಮಣಿಯರಿಗೆ ಜಾಮೀನು ಮಂಜೂರು ಮಾಡುವಂತೆ ಬೆದರಿಕೆ ಪತ್ರ ಬಂದಿದೆ.

ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದ್ದು, ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ಕಾರು ಉಡಾಯಿಸೋದಾಗಿ ಹೇಳಲಾಗಿದೆ. ಇದಲ್ಲದೆ ಸಿಸಿಬಿ ಡಿಸಿಪಿ ರವಿಕುಮಾರ್ ಮತ್ತು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಗೆ ಸಹ ಬೆದರಿಕೆ ಪತ್ರ ಬಂದಿದೆ. ಡ್ರಗ್ ಕೇಸ್ ಹಾಗು ಡಿಜೆ ಹಳ್ಳಿ ಕೇಸ್ ತನಿಖೆ ನಿಲ್ಲಿಸದಿದ್ರೆ ಸರಿ ಇರೋದಿಲ್ಲ ಅಂತಾ ಕೂಡ ಎಚ್ಚರಿಸಲಾಗಿದೆ. ತುಮಕೂರಿನಿಂದ ಬಂದಿರುವ ಅನಾಮಧೇಯ ಪತ್ರದಲ್ಲಿ ಬಾಂಬ್ ಇದೆ ಅಂತಾ ಹೆದರಿಸಲಾಗಿತ್ತು. ಪತ್ರದ ಒಳಗೆ ಕೇಬಲ್ ವೈರ್ ಮತ್ತು ಬಂಡೆ ಕತ್ತರಿಸಲು ಬಳಸುವ ಡಿಟೋನೇಟರ್ ಇತ್ತು ಅಂತಾ ಸಹ ಹೇಳಲಾಗಿದೆ. ಇದನ್ನೂ ಓದಿ: ರಾಗಿಣಿ, ಸಂಜನಾಗೆ ಬಿಗ್ ಶಾಕ್ – ಮೊಬೈಲ್‍ನಲ್ಲಿ ಸಿಕ್ಕಿದೆ ಸ್ಫೋಟಕ ಸಾಕ್ಷ್ಯ!

ಬಾಂಬ್ ಸ್ಕ್ವ್ಯಾಡ್ ಮತ್ತು ಶ್ವಾನ ದಳದಿಂದ ಪತ್ರದ ಒಳಗಿದ್ದ ವೈರ್ ತೆಗೆಯಲಾಗಿದೆ. ಬಾಂಬ್ ಪತ್ರ ಹುಸಿ ಪತ್ರ ಅನ್ನೋದು ಗೊತ್ತಾಗಿದ್ದು, ತುಮಕೂರಿನ ಕಡೆಯಿಂದ ಬಂದಿದೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ರಾಗಿಣಿ, ಸಂಜನಾಗೆ ರಾಜಾತಿಥ್ಯ

Comments

Leave a Reply

Your email address will not be published. Required fields are marked *