ರಸ್ತೆಯಲ್ಲಿ ಅಸ್ವಸ್ಥೆ ನರಳಾಟ- ತಿಂಡಿ ಕೊಟ್ಟು, ಆಸ್ಪತ್ರೆಗೆ ಕಳುಹಿಸಿದ ಪೊಲೀಸರು

– ಮಟನ್ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರು

ರಾಯಚೂರು: ಸಂಡೇ ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೂ ನೋಡುವವರು ಇಲ್ಲದೇ ರಸ್ತೆ ಬದಿಯಲ್ಲೇ ಮಾನಸಿಕ ಅಸ್ವಸ್ಥೆ ಗಾಯದ ನೋವಿನಿಂದ ನರಳಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಕಾಲಿಗೆ ಗಾಯ ಮಾಡಿಕೊಂಡ ಅಸ್ವಸ್ಥೆ ನೋವಿನಿಂದ ಚೀರಾಡುತ್ತಿದ್ದಳು. ಇದನ್ನ ಗಮನಿಸಿ ಪೊಲೀಸರು ಸದ್ಯ ಅಸ್ವಸ್ಥ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದರ ಬಜಾರ್ ಠಾಣೆ ಪಿಎಸ್‍ಐ ಮಂಜುನಾಥ್ ನರಳಾಡುತ್ತಿದ್ದ ಮಾನಸಿಕ ಅಸ್ವಸ್ಥೆಯನ್ನ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಪೊಲೀಸ್ ಠಾಣೆಯ ಪಕ್ಕದಲ್ಲೇ ಓಡಾಡುತ್ತಿದ್ದ ಮಹಿಳೆ ಇಂದು ಠಾಣೆಯ ಮುಂದಿನ ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದಳು. ಪೊಲೀಸರೇ ತಿಂಡಿಯನ್ನ ಕೊಟ್ಟು ಕಾಲಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಇನ್ನೂ ಲಾಕ್‍ಡೌನ್ ಮಧ್ಯೆಯೂ ರಾಯಚೂರಿನ ಮಟನ್ ಮಾರ್ಕೆಟ್‍ನಲ್ಲಿ ವ್ಯಾಪಾರ ಜೋರಾಗಿ ನಡೆದಿದೆ. ಜನ ಸಾಮಾಜಿಕ ಅಂತರ, ಮಾಸ್ಕ್ ಮರೆತು ವ್ಯಾಪಾರ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಇರುವುದರಿಂದ ಮಾಂಸದಂಗಡಿಗಳನ್ನ ತೆರೆಯಲಾಗಿದೆ. ಆದರೆ ಜನ ಜವಾಬ್ದಾರಿ ಮರೆತು ವ್ಯಾಪಾರಕ್ಕೆ ಮುಂದಾಗಿದ್ದಾರೆ.

ಕನಿಷ್ಠ ಮಾಸ್ಕನ್ನೂ ಧರಿಸದೇ ಮೀನು, ಮಾಂಸ ಖರೀದಿ ಮಾಡುತ್ತಿದ್ದಾರೆ. ಉಳಿದಂತೆ ತರಕಾರಿ ಮಾರುಕಟ್ಟೆಯಲ್ಲೂ ಹೆಚ್ಚು ಜನ ವ್ಯಾಪಾರಕ್ಕೆ ಮುಂದಾಗಿದ್ದಾರೆ. ಇದನ್ನ ಹೊರತುಪಡಿಸಿದಂತೆ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು, ಬಸ್, ಆಟೋ ಸಂಚಾರ ಸೇರಿ ಎಲ್ಲಾ ಬಂದ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *