ರಸ್ತೆಯಲ್ಲಿ ಕಾದು ಕುಳಿತ ಅಭಿಮಾನಿಗೆ ಕಿಚ್ಚ ಸುದೀಪ್ ನೆರವು

– ಅಪಘಾತದಲ್ಲಿ ಕಾಲು ಕಳಕೊಂಡಿರೋ ಅಭಿಮಾನಿ

ಮೈಸೂರು: ನೆರೆ ಪರಿಹಾರ, ಶಾಲಾ ಶುಲ್ಕ, ಮದುವೆ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನಿಗಳ ಕೈ ಹಿಡಿದಿರುವ ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಹೌದು. ಸುದೀಪ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ದೇವಿಯ ದರ್ಶನ ಪಡೆದಿದ್ದಾರೆ. ಇದಕ್ಕೂ ಮೊದಲು ದಾರಿ ಮಧ್ಯೆ ತಮ್ಮ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿ ಸಹಾಯ ಮಾಡುವ ಮೂಲಕ ಆತನ ಕೈಹಿಡಿದಿದ್ದಾರೆ.

ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಅಭಿಮಾನಿ ರಾಘವ್‍ಗೆ ತನ್ನ ನೆಚ್ಚಿನ ನಟ ಬರುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಅವರು ಸುದೀಪ್ ನನ್ನು ಭೇಟಿ ಮಾಡಲು ಮಾರ್ಗ ಮಧ್ಯೆ ಕಾದು ಕುಳಿತಿದ್ದರು. ಅಂತೆಯೇ ಅದೇ ದಾರಿಯಲ್ಲಿ ಬಂದ ಅಭಿನಯ ಚಕ್ರವರ್ತಿ, ಅಭಿಮಾನಿಯನ್ನು ಕಂಡು ಕಾರಿನಿಂದ ಕೆಳಗಿಳಿದು ಬಂದು ಮಾತನಾಡಿಸಿದ್ದಾರೆ.

ದಾರಿಯಲ್ಲಿ ಕಾರು ನಿಲ್ಲಿಸಿ ರಾಘವ್ ಬಳಿ ಹೋಗಿ ಮಾತನಾಡಿಸಿ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಅಭಿಮಾನಿ ಕೂಡ ಸುದೀಪ್ ಬಳಿ ತನ್ನ ದುಃಖ ತೋಡಿಕೊಂಡಿದ್ದಾರೆ. ಅಭಿಮಾನಿಯ ಕಣ್ಣೀರ ಕಥೆ ಕೇಳಿದ ಮಾಣಿಕ್ಯ, ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸದ್ಯ ಸುದೀಪ್ ಮಾನವೀಯತೆಗೆ ಅವರ ಅಭಿಮಾನಿಗಳು ಮತ್ತೊಮ್ಮೆ ಸಲಾಮ್ ಎಂದಿದ್ದು, ತಮ್ಮ ನೆಚ್ಚಿನ ನಟನ ಘನ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *