ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲ ಎಂದು ಮಹಿಳೆ ಆತ್ಮಹತ್ಯೆ

ಚಿಕ್ಕಮಗಳೂರು: ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಿಲ್ಲ ಎಂದು ಮನನೊಂದು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮುದುಗುಣಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅಸ್ಸಾಂ ಮೂಲದ 22 ವರ್ಷದ ಹಲ್ಕಿಮಾ ಎಂದು ಗುರುತಿಸಲಾಗಿದೆ. ಮೃತ ಹಲ್ಕಿಮಾಳಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗುವಿದೆ. ಆ ಮಗುವನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ನವೀನ್ ಲಾಯ್ಡ್ ಮಿಸ್ಕತ್ ಎಂಬುವರ ಕಾಫಿ ಎಸ್ಟೇಟ್ ಕೆಲಸಕ್ಕೆ ಅಸ್ಸಾಂ ಮೂಲದ ಕಾರ್ಮಿಕರು ಬಂದಿದ್ದರು. ಹಬ್ಬದ ಹಿನ್ನೆಲೆ ತನ್ನ ಪತಿಗೆ ಹೊಸ ಬಟ್ಟೆ ಬೇಕೆಂದು ಹಲ್ಕಿಮಾ ಕೇಳಿದ್ದು, ಆಗ ಪತಿ ಇಷ್ಟು ದಿನ ಲಾಕ್‍ಡೌನ್ ಆಗಿ ಈಗ ಕೆಲಸ ಆರಂಭವಾಗಿದೆ. ಮುಂದಿನ ದಿನದಲ್ಲಿ ಹೊಸ ಬಟ್ಟೆ ಕೊಡಿಸುವುದಾಗಿ ಹೇಳಿದ್ದಾನೆ.

ಪತಿಯ ಮಾತಿನಿಂದ ಮನನೊಂದ ಹಲ್ಕಿಮಾ ತೋಟಕ್ಕೆ ಹೋಗಿ ತನ್ನ ವೇಲ್‍ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳಕ್ಕೆ ಬಾಳೆಹೊನ್ನೂರು ಪಿಎಸ್‍ಐ ನೀತು ಗುಡೆ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *