ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ: ಪುನೀತ್

– ಸಿನಿಮಾಕ್ಕೆ ಬರುವಾಗ ಮಾಸ್ಕ್ ಧರಿಸಿ, ಕೊರೊನಾ ನಿಯಮ ಪಾಲಿಸಿ
– ಮಂಡ್ಯದ ಅಭಿಮಾನಕ್ಕೆ ಬೆಲೆ ಇಲ್ಲ

ಮಂಡ್ಯ: ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ ಆಶೀರ್ವದಿಸಿ. ಹಾಗೆಯೇ ಸಿನಿಮಾ ನೋಡಲು ಬರುವಾಗ ಮಾಸ್ಕ್ ಧರಿಸಿ, ಕೊರೊನಾ ನಿಯಮ ಪಾಲಿಸಿ ಎಂದು ಸ್ಯಾಂಡಲ್‍ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಸಿನಿಮಾ ಪ್ರಮೋಷನ್‍ಗಾಗಿ ಮೈಸೂರು ಬಳಿಕ ಮಂಡ್ಯಕ್ಕೆ ತೆರಳಿದ ಅಪ್ಪುಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಜೆಸಿಬಿ ಮೂಲಕ ಹೂಮಳೆ ಸುರಿಸಿ ಅಪ್ಪುಗೆ ಸ್ವಾಗತ ಕೋರಲಾಯಿತು. ಕಿರಗಂದೂರು ಗೇಟ್ ಬಳಿ ನೂರಾರು ಅಭಿಮಾನಿಗಳು ಅಪ್ಪು ಅಪ್ಪು ಎಂದು ಕೂಗಿದರು.

ಕಿರಗಂದೂರು ಯುವರತ್ನ ಸಿನಿಮಾ ನಿರ್ಮಾಪಕ ವಿಜಯ್ ಅವರ ಹುಟ್ಟೂರಾಗಿದ್ದು, ಹೀಗಾಗಿ ಕಿರಗಂದೂರು ಗೇಟ್ ಬಳಿಯಿಂದ ಸಿಲ್ವರ್ ಜ್ಯುಬಿಲಿ ಪಾರ್ಕ್‍ವರೆಗೂ ಬೈಕ್ ರ್ಯಾಲಿ ನಡೆಸಲಾಯಿತು. ಬೆಳ್ಳಿ ರಥದಲ್ಲಿ ಪುನೀತ್ ರಾಜ್‍ಕುಮಾರ್ ರೋಡ್ ಷೋ ಮಾಡಿದ್ರು. ಈ ವೇಳೆ ನಟ ಡಾಲಿ ಧನಂಜಯ, ನಿರ್ದೇಶಕ ಸಂತೋಷ್, ನಿರ್ಮಾಪಕ ವಿಜಯ್ ಕಿರಗಂದೂರು ಸಾಥ್ ನೀಡಿದರು. ನಂತರ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಲ್ಲಿ ಕಾರ್ಯಕ್ರಮ ನೆರವೇರಿತು.

ಇದೇ ವೇಳೆ ಡ್ಯಾನ್ಸ್ ಮಾಡುವಂತೆ ಪುನೀತ್ ಮುಂದೆ ಅಭಿಮಾನಿಗಳು ಬೇಡಿಕೆ ಇಟ್ಟರು. ಈ ಹಿನ್ನೆಲೆಯಲ್ಲಿ ಯುವರತ್ನ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳನ್ನು ಅಪ್ಪು ರಂಜಿಸಿದರು.

ಬಳಿಕ ಮಾತನಾಡಿದ ಪುನೀತ್, ಮಂಡ್ಯದ ಅಭಿಮಾನಕ್ಕೆ ಬೆಲೆ ಇಲ್ಲ. ಮಂಡ್ಯದ ಊಟ, ಅಭಿಮಾನಿಗಳ ಪ್ರೀತಿ ತುಂಬಾ ಇಷ್ಟ. ಕನ್ನಡ ಸಿನಿಮಾ, ಕಲಾವಿದರ ಮೇಲೆ ಮಂಡ್ಯ ಜನ ಅಪಾರ ಪ್ರೀತಿ ಇಟ್ಟಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ಬೆಲೆ ಇಲ್ಲ. ಕನ್ನಡ ಸಿನಿಮಾ, ಕಲಾವಿದರ ಮೇಲೆ ಹೀಗೇ ನಿರಂತರವಾಗಿ, ಪ್ರೀತಿ ಇರಲಿ. ಯುವರತ್ನ ಸೇರಿದಂತೆ ಎಲ್ಲಾ ಕನ್ನಡ ಸಿನಿಮಾಗಳನ್ನು ನೋಡಿ, ಆಶೀರ್ವದಿಸಿ. ಸಿನಿಮಾಕ್ಕೆ ಬರುವಾಗ ಮಾಸ್ಕ್ ಧರಿಸಿ, ಕೊರೋನಾ ನಿಯಮ ಪಾಲಿಸಿ ಎಂದು ಹೇಳಿದರು.

Comments

Leave a Reply

Your email address will not be published. Required fields are marked *