ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ: ಕೋಡಿಹಳ್ಳಿ ಎಚ್ಚರಿಕೆ

ಬೆಂಗಳೂರು: ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಚಿವರೇ ನಮಗೆ ಧನಾತ್ಮಕವಾಗಿ ಸ್ಪಂದನೆ ಕೊಡಿ. ಸರ್ಕಾರ ಸಾರಿಗೆ ನೌಕರರನ್ನ ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ತಿದೆ. ಇದು ಮಾನವೀಯತೆನಾ..? ಪೊಲೀಸರನ್ನ ಬಿಟ್ಟು ಅಪಮಾನ ಮಾಡ್ತಿರಲ್ಲ. ಮಿಸ್ಟರ್ ಸವದಿಯವ್ರೇ…? ಮುಖಾಮುಖಿ ಕೂತು ಚರ್ಚೆಯಾಗಲಿ. ಗೌರವಯುತವಾಗಿ ಕರೆದು ಮಾತನಾಡಿದ್ರೆ ನಾವು ರೆಡಿ ಇದ್ದೇವೆ ಎಂದು ಆಗ್ರಹಿಸಿದ್ದಾರೆ.

ಎಸ್ಮಾ ಜಾರಿ(ಅಗತ್ಯ ಸೇವೆ ನಿರ್ವಹಣೆ ಕಾಯಿದೆ)ಗೆ ಮಾಡ್ತೀವಿ ಅಂತ ಹೆದರಿಸ್ತಿದ್ದಾರೆ. ಎಲ್ಲರ ಮೇಲೂ ಎಸ್ಮಾ ಜಾರಿ ಮಾಡುತ್ತೀರಾ..? ಸರ್ಕಾರದಿಂದ ಸ್ಪಂದನೆ ಸಿಗೋ ತನಕ ನಮ್ಮ ಮತ್ತು ಬಸ್ ಬಂದ್ ನಡೆಯುತ್ತಲೇ ಇರುತ್ತದೆ. ಸರ್ಕಾರ ಸ್ಪಂದಿಸಿದ್ರೆ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗ್ತೇವೆ. ಸಾರಿಗೆ ನೌಕರರ ಜೊತೆ ರೈತ ಸಂಘಟನೆಗಳಿವೆ. ದಿನಾಂಕ ಹೇಳಲ್ಲ. ಯಾವ ಸಮಯದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ಇನ್ನು ನಾವು ಸುಮ್ಮನೆ ಕೂಡೋಕೆ ಆಗಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *