ಯಾರ ಮೇಲೂ ಹಲ್ಲೆ ಮಾಡಿಲ್ಲ: ಸೌಮ್ಯ ರೆಡ್ಡಿ ಸ್ಪಷ್ಟನೆ

ಬೆಂಗಳೂರು: ಇಂದು ಕರ್ತವ್ಯ ನಿರತ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಯ ಕುರಿತು ಶಾಸಕಿ ಸೌಮ್ಯ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ, ನಾವೆಲ್ಲರೂ ಶಾಂತಿಯುತವಾಗಿ ನಡೆದುಕೊಂಡು ಬರುತ್ತಿದ್ದಾಗ ಪೊಲೀಸರೇ ನಮ್ಮನ್ನ ತಳ್ಳಿದರು. ತಳ್ಳಬೇಡಿ ಅಂತ ಹೇಳಿದ್ರೂ ತಳ್ಳಾಟ ನೂಕಾಟದಲ್ಲಿ ನಾನು ಕೆಳಗೆ ಬಿದ್ದೆ. ನಾನು ಯಾರ ಮೇಲೆಯೂ ಹಲ್ಲೆ ಮಾಡಿಲ್ಲ. ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಎಲ್ಲ ನಾಯಕರು, ಕಾರ್ಯಕರ್ತರು ಸಹ ಅಲ್ಲಿದ್ದರು. ರಾಜ್ಯ ಸರ್ಕಾರ ಪೊಲೀಸರ ಮೂಲಕ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿತು ಎಂದು ಆರೋಪಿಸಿದರು.

ಬಲವಂತವಾಗಿ ಪೊಲೀಸರು ನಮ್ಮನ್ನು ಬಸ್ ನೊಳಗೆ ತಳ್ಳುತ್ತಿದ್ದರು. ಎಳೆಯಬೇಡಿ, ತಳ್ಳಬೇಡಿ ಅಂತ ಹೇಳುತ್ತಿದ್ದರೂ ತಳ್ಳಿದರು. ಪ್ರತಿಭಟನಾ ಸ್ಥಳದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕಡಿಮೆ ಸಂಖ್ಯೆಯಲ್ಲಿದ್ದರು. ಕೆಳಗೆ ಬಿದ್ದಾಗ ನಮ್ಮನ್ನ ರಕ್ಷಿಸಿಕೊಳ್ಳಲು ಹೋಗಿದ್ದೇವೆ. ಪೊಲೀಸರ ಮೇಲೆ ನಾವ್ಯಾಕೆ ಹಲ್ಲೆ ಮಾಡೋಣ. ಪೊಲೀಸರೇ ಅನಗತ್ಯವಾಗಿ ಗೊಂದಲ ಮಾಡಿದರು ಎಂದರು.

ಲೇಡಿ ರೌಡಿ ಆಗಲು ಹೊರಟಿದ್ದೀರಾ?: ಇದೇನು ಸೌಮ್ಯ ರೆಡ್ಡಿ ಅವರೇ, ಲೇಡಿ ರೌಡಿ ಆಗಲು ಹೊರಟಿದ್ದೀರಾ? ಡಿ.ಕೆ.ಶಿವಕುಮಾರ್ ಅವರ ಕುಮ್ಮಕ್ಕಿನಿಂದ ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದೇ? ಜನಸಾಮಾನ್ಯರಿಗೆ ತೊಂದರೆ, ಪೊಲೀಸರ ಮೇಲೆ ಹಲ್ಲೆ ಇದು ಪ್ರಜಾಪ್ರಭುತ್ವಕ್ಕೆ ಕಾಂಗ್ರೆಸ್ ಕೊಡುವ ಗೌರವವೇ ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ನಡೆದಿದ್ದೇನು?: ರೈತ ಕಾಯ್ದೆ ರದ್ಧತಿ ಆಗ್ರಹಿಸಿ ಇಂದು ಕಾಂಗ್ರೆಸ್ ರಾಜಭವನ ಚಲೋವನ್ನು ಆಯೋಜಿಸಿತ್ತು. ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶದ ಬಳಿಕ ರಾಜಭವನಕ್ಕೆ ತೆರಳಲು ಹೋಗುತ್ತಿದ್ದಾಗ ಪೊಲೀಸರು ಕಾಂಗ್ರೆಸ್ ನಾಯಕರನ್ನು ತಡೆದಿದ್ದಾರೆ. ಈ ವೇಳೆ ಸೌಮ್ಯಾ ರೆಡ್ಡಿ ಅವರನ್ನು ಮಹಿಳಾ ಪೊಲೀಸರು ತಡೆದಿದ್ದಾರೆ. ಈ ವೇಳೆ ಸೌಮ್ಯ ರೆಡ್ಡಿ “ಹೂ ದಿ ಹೆಲ್” ಎಂದು ಹೇಳಿ ಮಹಿಳಾ ಸಿಬ್ಬಂದಿಯ ಮೇಲೆ ಕೈ ಎತ್ತಿದ್ದಾರೆ.

ತಳ್ಳಾಟ ನೂಕಾಟದಿಂದ ಕೋಪಗೊಂಡಿದ್ದ ಸೌಮ್ಯ ರೆಡ್ಡಿ ಹಲ್ಲೆ ಮಾಡಿ ಮಾಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಳಿ ಮಹಿಳಾ ಪೇದೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *