ಯಾರೋ ಮೃತಪಟ್ಟಿರೋದಕ್ಕೂ, ಬೆಡ್ ಸಿಗದಿರುವುದಕ್ಕೂ ಸಂಬಂಧ ಇಲ್ಲ: ಸಿಎಂ

ಬೆಂಗಳೂರು: ಇಂದು ಖಾಸಗಿ ಆಸ್ಪತ್ರೆಯವರು 750 ಬೆಡ್ ಕೊಡುತ್ತಿದ್ದಾರೆ. ಹೀಗಾಗಿ ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಸೋಮವಾರ ಖಾಸಗಿ ಆಸ್ಪತ್ರೆಗಳ ಜೊತೆ ಸಭೆ ಮಾಡಿದ್ದೇವೆ. ಹೀಗಾಗಿ ಖಾಸಗಿ ಆಸ್ಪತ್ರೆಯವರು 2 ಸಾವಿರ ಬೆಡ್‍ಗಳನ್ನು ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್‍ಗಳನ್ನು ಕೊಡುತ್ತಿದ್ದಾರೆ. ಯಾರೋ ಮೃತಪಟ್ಟಿರುವುದಕ್ಕೂ ಬೆಡ್ ಸಿಗದೇ ಇರುವುದಕ್ಕೂ ಸಂಬಂಧ ಇಲ್ಲ ಎಂದು ಗರಂ ಆದರು.

ನಮ್ಮ ಶಕ್ತಿ ಮೀರಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಕೊರೊನಾ ನಿಯಂತ್ರಿಸಲು ಇಷ್ಟೊಂದು ಕ್ರಮವನ್ನು ಯಾರೂ ಕೈಗೊಂಡಿಲ್ಲ, ನಾವು ಮಾಡುತ್ತಿದ್ದೇವೆ. ಇನ್ನೂ ಮಾಡಬೇಕಾದ ಕೆಲಸಗಳು ಬೇಕಾದಷ್ಟಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯವರು ಬೆಡ್ ಕೊಡಲು ಒಪ್ಪಿಕೊಂಡಿದ್ದಾರೆ. ಇಂದು 750 ಬೆಡ್ ಕೊಡುತ್ತಿದ್ದಾರೆ ಎಂದು ಸಿಎಂ ಹೇಳಿದರು.

ಬೆಂಗಳೂರಿನ 52 ವರ್ಷದ ನಗರದ ಪೇಟೆ ನಿವಾಸಿಯೊಬ್ಬರು ಶನಿವಾರ ಸಂಜೆ ತೀವ್ರ ಜ್ವರ ಉಸಿರಾಟದಿಂದ ಬಳಲುತ್ತಿದ್ದರು. ನಗರದ ಪ್ರಮುಖ ಆಸ್ಪತ್ರೆ ಸೇರಿದಂತೆ 18 ಆಸ್ಪತ್ರೆಗಳಲ್ಲಿ ಅಡ್ಮಿಟ್ ಮಾಡಿಕೊಳ್ಳವಂತೆ ಮನವಿ ಮಾಡಿದ್ದರು. ಯಾವುದೇ ಆಸ್ಪತ್ರೆಯಲ್ಲೂ ಈ ವ್ಯಕ್ತಿಯನ್ನು ಆಡ್ಮಿಟ್ ಮಾಡಿಕೊಂಡಿಲ್ಲ. ಭಾನುವಾರ ಸಂಜೆ ಹೊತ್ತಿಗೆ ಮತ್ತೆ ತೀವ್ರ ಉಸಿರಾಟದ ಸಮಸ್ಯೆ ಆದ ನಂತರ ಕನ್ನಿಂಗ್ ಹ್ಯಾಮ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದರು.

Comments

Leave a Reply

Your email address will not be published. Required fields are marked *