ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ನಷ್ಟ ವಸೂಲಿ : ಬೊಮ್ಮಾಯಿ

ಬೆಂಗಳೂರು: ಯಾರು ಹಾನಿ ಮಾಡಿದ್ದಾರೆ ಅವರಿಂದಲೇ  ನಷ್ಟ  ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ ಎಂದು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ವಿಚಾರವಾಗಿ ಇಂದು ಗೃಹ ಸಚಿವರ ನಿವಾಸದಲ್ಲಿ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ಪೊಲೀಸ್ ಆಯುಕ್ತ ಕಮಲ್‍ಪಂತ್ ಮತ್ತು ಲಾ ಅಂಡ್ ಆರ್ಡರ್ ಎಡಿಜಿ ಅಮರ್ ಕುಮಾರ್ ಪಾಂಡೆ ಸೇರಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಬೊಮ್ಮಾಯಿ ಆಸ್ತಿಯನ್ನು ಯಾರು ನಾಶ ಮಾಡಿದ್ದಾರೆ ಅವರಿಂದಲೇ ಜಪ್ತಿ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಫೇಸ್‍ಬುಕ್‍ನಲ್ಲಿ ಪೋಸ್ಟ್ ನೋಡಿ, ಕಾನೂನು ಕೈಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕಾರು ಜಖಂ ಮಾಡಿದ್ದಾರೆ. ಎಂಎಲ್‍ಎ ಮನೆ ಮೇಲೆ ದಾಳಿ ಮಾಡಿದ್ದಾರೆ. ಹೀಗಾಗಿ ನಮ್ಮ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈ ವೇಳೆ 3 ಜನ ಡೆತ್ ಆಗಿದ್ದಾರೆ. ಜೊತೆಗೆ 145 ಅರೆಸ್ಟ್ ಮಾಡಿದ್ದೇವೆ. ಸಮಾಜದ ಶಾಂತಿ ಹಾಳು ಮಾಡುವ ಪೋಸ್ಟ್ ಹಾಕಿದ್ದ ನವೀನ್‍ನನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಹೆಚ್ಚಿನ ಸಿ.ಆರ್.ಪಿ.ಎಫ್ ತಂಡ ಬೇಕು ಎಂದು ದೆಹಲಿಗೆ ಕೇಳಿದ್ದೇವೆ. ಆರ್.ಪಿ.ಎಫ್ 6 ತುಕಡಿಗಳನ್ನು ಕಳಿಸಿಕೊಡುತ್ತಾರೆ. ದಂಗೆಗಳಾದ ಸಮಯದಲ್ಲಿ ಏನು ಆಸ್ತಿ-ಪಾಸ್ತಿ ನಷ್ಟ ಆಗಿರುತ್ತದೆ. ಅದನ್ನು ನಾಶ ಮಾಡಿದವರಿಂದಲೇ ವಸೂಲಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶವಿದೆ. ಸುಪ್ರೀಂಕೋರ್ಟ್ ಆದೇಶಕ್ಕೂ ಮುಂದೆ ಹೋಗಿ ನಮ್ಮವರು ಕಾರ್ಯಾಚರಣೆ ಮಾಡಬೇಕು. ಯಾರು ಹಾನಿ ಮಾಡಿದ್ದಾರೆ ಅವರಿಂದಲೇ ವಸೂಲಿ ಮಾಡುವ ಪ್ರಕ್ರಿಯೆಗೆ ಆದೇಶ ಕೊಟ್ಟಿದ್ದೇನೆ. ಯಾವ ರೀತಿ ತನಿಖೆ ಮಾಡಬೇಕು ಎಂದು ಮುಖ್ಯಮಂತ್ರಿ ಜೊತೆ ಮಾತಾಡಿ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವರು, ನಮ್ಮ ಕರ್ನಾಟಕ ಪೊಲೀಸರೆ ಸಶಕ್ತರು ಇದ್ದಾರೆ. ನಮಗೆ ಏನೂ ಮಾಡಬೇಕು ಗೊತ್ತಿದೆ. ನಮ್ಮ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ. ಹೀಗಿರುವಾಗ ಸಿಬಿಐ ಪ್ರಶ್ನೆ ಬರುವುದಿಲ್ಲ. ಎಲ್ಲವೂ ತನಿಖೆ ಹಂತದಲ್ಲಿ ಇದೆ ನಮ್ಮ ಪೊಲೀಸರೇ ನಿಭಾಯಿಸುತ್ತಾರೆ. ಹೀಗಾಗಿ ಸಿಬಿಐಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Comments

Leave a Reply

Your email address will not be published. Required fields are marked *