ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ?: ರಾಮದಾಸ್

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಡಿಜೆ ಹಳ್ಳಿ ಗಲಭೆ ಪ್ರದೇಶದ ಭೇಟಿಗೆ ಬಿಜೆಪಿ ಶಾಸಕ ರಾಮದಾಸ್ ಲೇವಡಿ ಮಾಡಿದ್ದು, ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಾಮದಾಸ್, ಡಿ.ಜೆ ಹಳ್ಳಿಯ ಗಲಭೆ ನಡೆದ ಜಾಗಕ್ಕೆ ಸಿದ್ದರಾಮಯ್ಯ ಅವರು ಇಂದು ಭೇಟಿ ನೀಡಿದ್ದಾರೆ. ಅವರು ಇನ್ನೂ ಓಲೈಕೆ ರಾಜಕಾರಣ ಮಾಡಲು ಹೊರಟಿದ್ದಾರೆಯೇ ಹೊರತು ತಮ್ಮ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಈ ರೀತಿ ಆಯಿತಲ್ಲ ಎಂದು ಮರುಕ ವ್ಯಕ್ತ ಪಡಿಸಲಿಲ್ಲ.! ಯಾರಿಗಾಗಿ ಈ ಓಲೈಕೆ ಸಿದ್ದರಾಮಯ್ಯ ಅವರೇ? ಎಂದು ಬರೆದುಕೊಂಡಿದ್ದಾರೆ.

ಇಂದು ಮಾಜಿ ಸಿಎಂ ಸಿದ್ದರಾಮ್ಯಯ ಅವರು, ಡಿ.ಜೆ ಹಳ್ಳಿಯ ಗಲಭೆ ನಡೆದ ಜಾಗಕ್ಕೆ ಭೇಟಿ ನೀಡಿದ್ದರು. ಈ ಕುರಿತು ಫೋಟೋಗಳನ್ನು ಟ್ವೀಟ್ ಮಾಡಿದ್ದರು. ಅಲ್ಲದೇ ಡಿ.ಜೆ ಹಳ್ಳಿಯಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ನಾನು ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ, ಸೋಂಕಿನಿಂದ ಗುಣಮುಖನಾದ ನಂತರ ಕೆಲವು ದಿನಗಳ ಕಾಲ ಹೋಂ ಕ್ವಾರೆಂಟೈನ್‍ಗೂ ಒಳಗಾಗಿದ್ದೆ. ಈ ಎಲ್ಲಾ ಕಾರಣಗಳಿಂದಾಗಿ ಘಟನೆ ನಡೆದ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ.

ಒಂದು ವೇಳೆ ಪ್ರವಾದಿ ಮಹಮದ್ ಅವರ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ ನವೀನ್‍ನ ಶೀಘ್ರ ಬಂಧನವಾಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರಲಿಲ್ಲವೇನೊ. ಗಲಭೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ಗಲಭೆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *